ಗ್ಯಾಂಗ್ಟಾಕ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ಬುಧವಾರ ಸಿಕ್ಕಿಂ ಅನ್ನು ಸಂಪೂರ್ಣ ಸಾಕ್ಷರ ರಾಜ್ಯ ಎಂದು ಘೋಷಿಸಲಾಯಿತು.
ಸಿಕ್ಕಿಂ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಕೇಂದ್ರ ಸರ್ಕಾರದ 'ಉಲ್ಲಾಸ್' ಉಪಕ್ರಮದ ಅಡಿಯಲ್ಲಿ ಈ ಘೋಷಣೆ ಮಾಡಿದರು.
'ಉಲ್ಲಾಸ್, ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ರಾಜ್ಯವನ್ನು ಅಧಿಕೃತವಾಗಿ ಸಂಪೂರ್ಣ ಸಾಕ್ಷರ ರಾಜ್ಯ ಎಂದು ಘೋಷಿಸಿರುವ ಈ ಐತಿಹಾಸಿಕ ಕ್ಷಣದಲ್ಲಿ ಸಿಕ್ಕಿಂ ಜನತೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು' ಎಂದು ತಮಾಂಗ್ ತಿಳಿಸಿದ್ದಾರೆ.
'ಎಲ್ಲಾ ವಯೋಮಾನದ ಕಲಿಯುವವರ ಉತ್ಸಾಹ ಮತ್ತು ಪರಿಶ್ರಮದಿಂದಾಗಿ ಈ ಸಾಧನೆ ಸಾಧ್ಯವಾಗಿದೆ, ಅವರಲ್ಲಿ ಅನೇಕರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಓದಲು ಮತ್ತು ಬರೆಯಲು ಕಲಿತಿದ್ದಾರೆ' ಎಂದು ಹೇಳಿದ್ದಾರೆ.
'ಅವರ ದೃಢಸಂಕಲ್ಪವು 'ಸಾಕ್ಷರ ಸಿಕ್ಕಿಂ'ನ ನಿಜವಾದ ಮನೋಭಾವವನ್ನು ಒಳಗೊಂಡಿದೆ ಮತ್ತು ಮುಂದಿನ ಪೀಳಿಗೆಗೆ ಭರವಸೆ ಹಾಗೂ ಸ್ಫೂರ್ತಿಯ ದೀಪವಾಗಿ ಕಾರ್ಯನಿರ್ವಹಿಸುತ್ತದೆ' ಎಂದು ತಿಳಿಸಿದ್ದಾರೆ.
ಸಾಕ್ಷರತಾ ಅಭಿಯಾನದೊಂದಿಗೆ ಕೈಜೋಡಿಸಿದ ಶಿಕ್ಷಣ ಇಲಾಖೆ, ಸ್ವಯಂಸೇವಕ ಶಿಕ್ಷಕರು, ಶಿಕ್ಷಣ ತಜ್ಞರು, ಸಂಯೋಜಕರು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ತಮಾಂಗ್ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಸಿಕ್ಕಿಂ ಜನತೆಯನ್ನು ಅಭಿನಂದಿಸಿದ ಮುರ್ಮು, ಈ ಸಾಧನೆಯು ಶಿಕ್ಷಣದ ಮೂಲಕ ಅಂತರ್ಗತ ಅಭಿವೃದ್ಧಿ ಮತ್ತು ಸಾಮಾಜಿಕ ಸಬಲೀಕರಣದತ್ತ ಇಟ್ಟ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಮಿಜೋರಾಂ, ಗೋವಾ, ತ್ರಿಪುರ ಮತ್ತು ಹಿಮಾಚಲ ಪ್ರದೇಶ ಈಗಾಗಲೇ ಸಂಪೂರ್ಣ ಸಾಕ್ಷರ ರಾಜ್ಯಗಳಾಗಿವೆ.

