ಬೆಂಗಳೂರು: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯದ ಜನರ ಜೀವನವನ್ನು ಉತ್ತಮಗೊಳಿಸಲು ತಮಿಳುನಾಡು ಸರಕಾರದೊಂದಿಗೆ ಕೂಡಿ ಕೆಲಸ ಮಾಡುವುದನ್ನು ಕೇಂದ್ರವು ಈಗಲೂ ಮುಂದುವರಿಸಲಿದೆ ಎಂಂದು ಭರವಸೆ ನೀಡಿದ್ದಾರೆ.
ಇದೇ ವೇಳೆ, ದೀರ್ಘಕಾಲದ ಮಿತ್ರಪಕ್ಷವಾದ ಡಿಎಂಕೆಗೆ ಕೈಕೊಟ್ಟಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಅದನ್ನು ಪರಾವಲಂಬಿ ಮತ್ತು ನಂಬಿಕೆ ದ್ರೋಹಿ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಈಗ ತಮಿಳುನಾಡಿನಲ್ಲಿ ಅಧಿಕಾರಕ್ಕೇರಿರುವ ಟಿವಿಕೆಯ ಮಿತ್ರಪಕ್ಷವಾಗಿದೆ.
ರವಿವಾರ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಮಿಳುನಾಡಿನಲ್ಲಿ ಸದ್ಯದ ಪರಿಸ್ಥಿತಿಯನ್ನು ಒಮ್ಮೆ ನೋಡಿ. ಕಳೆದ 25-30 ವರ್ಷಗಳಿಂದಲೂ ಕಾಂಗ್ರೆಸ್ ಡಿಎಂಕೆ ಜೊತೆ ನಿಕಟ ಮೈತ್ರಿಯನ್ನು ಹೊಂದಿತ್ತು. ಹಲವು ಸಂದರ್ಭಗಳಲ್ಲಿ ಡಿಎಂಕೆ ಜೊತೆಗಿನ ಮೈತ್ರಿಯೇ ಕಾಂಗ್ರೆಸ್ನ್ನು ಸಂಕಷ್ಟದಿಂದ ಪಾರು ಮಾಡಿತ್ತು. ವಾಸ್ತವದಲ್ಲಿ 2014ಕ್ಕಿಂತ ಮೊದಲು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ಮುಖ್ಯವಾಗಿ ಡಿಎಂಕೆ ಬೆಂಬಲದಿಂದಲೇ ಬದುಕುಳಿದಿತ್ತು. ಆದರೆ ರಾಜಕೀಯ ಗಾಳಿಯು ದಿಕ್ಕು ಬದಲಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷವು ತನ್ನ ಉನ್ನತಿಗಾಗಿ ನಿರಂತರವಾಗಿ ಶ್ರಮಿಸಿದ್ದ ಅದೇ ಡಿಎಂಕೆಗೆ ದ್ರೋಹ ಬಗೆದಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ತನ್ನ ಅಧಿಕಾರದ ಹಪಾಹಪಿಯಿಂದಾಗಿ ಸಿಕ್ಕ ಮೊದಲ ಅವಕಾಶದಲ್ಲೇ ಡಿಎಂಕೆಯ ಬೆನ್ನಿಗೆ ಚೂರಿ ಹಾಕಿದೆ. ಈಗ ಕಾಂಗ್ರೆಸ್ಗೆ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತೊಂದು ಪಕ್ಷದ ಬೆನ್ನೇರಿ ಸವಾರಿ ಮಾಡುವುದು ಅಗತ್ಯವಾಗಿದೆ ಎಂದು ಮೋದಿ ಕುಟುಕಿದರು.

