ಶ್ರೀನಗರ: 'ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ಕೊನೆಗಾಣಿಸಲು ಮಾತುಕತೆಯೊಂದೇ ದಾರಿ' ಎಂದ ಆರ್ಎಸ್ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿಕೆಯನ್ನು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸ್ವಾಗತಿಸಿದ್ದಾರೆ.
ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮುಫ್ತಿ, 'ಕಾಶ್ಮೀರ ಸಮಸ್ಯೆಗೆ ಪರಿಹಾರವು ಮಾತುಕತೆ ಮತ್ತು ಸಂವಿಧಾನದ ಚೌಕಟ್ಟಿನಲ್ಲಿದೆ.
ಈ ವಿಷಯದಲ್ಲಿ ಏನನ್ನು ಸಾಧಿಸಬೇಕಾಗಿದ್ದರೂ ಅದನ್ನು ಇಲ್ಲಿಂದಲೇ (ಜಮ್ಮು ಮತ್ತು ಕಾಶ್ಮೀರ) ಮಾಡಬೇಕಾಗಿದೆ. ಶಾಶ್ವತ ಶಾಂತಿಯನ್ನು ಇಲ್ಲಿನ ಜನರು ಬಯಸುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಹೊಸಬಾಳೆ ಅವರು ಈಗ ಹೇಳಿರುವುದು, ಪಿಡಿಪಿ ಸಂಸ್ಥಾಪಕ, ನನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರು ತಮ್ಮ ಕೊನೆಯ ಉಸಿರಿರುವವರೆಗೂ ಪ್ರತಿಪಾದಿಸಿದ್ದನ್ನೇ ಆಗಿದೆ. ನರೇಂದ್ರ ಮೋದಿ ಅವರು ತಮ್ಮ ಹೆಸರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಸಬೇಕೆಂದು ಬಯಸಿದರೆ, ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಮಾತುಕತೆ ಆರಂಭಿಸಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನವನ್ನು ಒಳಗೊಳ್ಳಿಸಬೇಕು' ಎಂದಿದ್ದಾರೆ.
'ನಾವು ಚಿನ್ನದ ರಸ್ತೆಗಳನ್ನು ಮತ್ತು ಬೆಳ್ಳಿಯ ಸೇತುವೆಗಳನ್ನು ನಿರ್ಮಿಸಿದರೂ, ಕಾಶ್ಮೀರ ಸಮಸ್ಯೆ ಬಗೆಹರಿಯದಿದ್ದರೆ ಅವುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ನನ್ನ ತಂದೆ ಹೇಳುತ್ತಿದ್ದರು. ಅಭಿವೃದ್ಧಿ ಒಳ್ಳೆಯದು, ಆದರೆ ಮಾತುಕತೆಗಳು ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ನೆಲೆಸಲು ಕಾರಣವಾಗುತ್ತದೆ' ಎಂದು ಪ್ರತಿಪಾದಿಸಿದ್ದಾರೆ.
'ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ನರೇಂದ್ರ ಮೋದಿ ಅವರು ಏನನ್ನೂ ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ. 2016 ರಲ್ಲಿ ಅವರು ಲಾಹೋರ್ಗೆ ಭೇಟಿ ನೀಡಿದ್ದರು, ಆದರೆ ಅದರ ಬೆನ್ನಲ್ಲೇ ಪಠಾಣ್ಕೋಟ್ ದಾಳಿ ನಡೆಯಿತು. ಭಾರತದ ಕಡೆಯಿಂದ ನಡೆಯುವ ಯಾವುದೇ ಸಕರಾತ್ಮಕ ಪ್ರಯತ್ನಗಳಿಗೆ ಪಾಕಿಸ್ತಾನವು ಸಕಾರಾತ್ಮಕವಾಗಿ ಸ್ಪಂದಿಸಬೇಕಾಗುತ್ತದೆ' ಎಂದು ಹೇಳಿದ್ದಾರೆ.
ಸೇನಾ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರೂ ಹೊಸಬಾಳೆ ಹೇಳಿಕೆಯನ್ನು ಬೆಂಬಲಿಸಿದ್ದು, ಉಭಯ ದೇಶಗಳ ನಡುವೆ ಮಾತುಕತೆ ತುಂಬಾ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

