ತಿರುವನಂತಪುರಂ: ಕೇರಳಂ ಕೆಎಸ್ಸಾರ್ಟಿಸಿ ಬಸ್ಗಳಲ್ಲೂ ಜೂನ್ 15ರಿಂದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಬಗ್ಗೆ ಸಚಿವ ಸಂಪುಟ ಚರ್ಚೆನಡೆಸಿದ್ದು, ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಸಾರಿಗೆ ಸಚಿವಾಲಯ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗದೆ, ಅಂತಿಮ ತೀರ್ಮಾನ ಕೈಗೊಳ್ಳುವ ಜವಾಬ್ದಾರಿ ಮುಖ್ಯಮಂತ್ರಿಗೆ ವಹಿಸಿಕೊಟ್ಟಿದೆ. ಈ ಬಗ್ಗೆ ಮುಖ್ಯಮಂತ್ರಿ ಪ್ರತ್ಯೇಕ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸೂಚನೆಯಿದೆ. ಕೆಎಸ್ಸಾರ್ಟಿಸಿಯಲ್ಲಿ ಉಚಿತ ಪ್ರಯಾಣದ ಸವಲತ್ತು ಎಲ್ಲಾ ಮಹಿಳೆಯರಿಗೂ ಲಭ್ಯವಾಗಲಿರುವುದಾಗಿ ರಾಜ್ಯ ಸಾರಿಗೆ ಸಚಿವ ಸಿ.ಪಿ ಜಾನ್ ತಿಳಿಸಿದ್ದರು.
ಕೆಎಸ್ಸಾರ್ಟಿಸಿಯ ಎಲ್ಲಾ ಬಸ್ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸವಲತ್ತು ಒದಗಿಸಿದಲ್ಲಿ, ಮೂರು ತಿಂಗಳಿಗೆ 112ಕೋಟಿ ರೂ. ಹೊರೆ ಸರ್ಕಾರದ ಮೇಲೆ ಬೀಳಲಿರುವುದಾಗಿ ಅಂಕಿಅಂಶ ತಿಳಿಸುತ್ತದೆ. ಸವಲತ್ತು ಸಾಮಾನ್ಯ ಬಸ್ಗಳಿಗೆ ಮಾತ್ರ ಅನ್ವಯವಾದರೆ ಮೂರು ತಿಂಗಳಿಗೆ ಈ ಮೊತ್ತ 57ಕೋಟಿ ರೂ. ಆಗಿರಲಿದೆ. ಸಿಟಿ ಫಾಸ್ಟ್ ಹಾಗೂ ಸಾಮಾನ್ಯ ಬಸ್ಗಳಿಗೆ 65ಕೋಟಿ, ಸಾಮಾನ್ಯ ಬಸ್ಗಳ ಜತೆಗೆ ಫಾಸ್ಟ್ ಪ್ಯಾಸೆಂಜರ್, ಸೂಪರ್ಫಾಸ್ಟ್ ಬಸ್ಗಳಲ್ಲೂ ನೀಡಿದರೆ 90ಕೋಟಿ ರೂ. ವೆಚ್ಚ ತಗಲಿರುವುದಾಗಿ ಲೆಕ್ಕ ಹಾಕಲಾಗಿದೆ. ಇದು ಸಿಬ್ಬಂದಿ ವೇತನ, ಪಿಂಚಣಿಯಂತಹ ಆರ್ಥಿಕಸಹಾಯದ ಹೊರತಾಗಿದ್ದು, ಈಮೊತ್ತವೂ ಸೇರ್ಪಡೆಯಾದಲ್ಲಿ ಇನ್ನೂ ಹೆಚ್ಚಿನ ಮೊತ್ತ ಸರ್ಕಾರ ವ್ಯಯಿಸಬೇಕಾಗಿಬರಲಿದೆ.
ಪ್ರತಿ ದಿನ 10ರಿಂದ 12ಲಕ್ಷ ಮಂದಿ ಮಹಿಳೆಯರು ಪ್ರಯಾಣಿಸುವ ಸಾಧ್ಯತೆಯಿದ್ದು, ಉಚಿತ ಯೋಜನೆ ಜಾರಿಯಾದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಪ್ರಸಕ್ತ ಯಾವುದೇ ಸ್ಕೀಂ ಜಾರಿಗೊಳಿಸುತ್ತಿದ್ದರೂ, ಕೆಎಸ್ಸಾರ್ರ್ಟಿಸಿಗೆ ಸರ್ಕಾರ ಮುಂಗಡವಾಗಿ ಹಣ ಪಾವತಿಸಿದಲ್ಲಿ ಮಾತ್ರ ಯೋಜನೆ ಮುಂದುವರಿಸಲು ಸಾಧ್ಯ ಎಂಬುದಾಗಿ ತಜ್ಞ ಸಮಿತಿ ತಿಳಿಸಿದೆ.
ಈಗಾಗಲೇ ಪ್ರತಿಪಕ್ಷ ಬಿಜೆಪಿಯ ಅಂಗವಾಗಿರುವ ಮಹಿಳಾ ಮೋರ್ಚಾ ಉಚಿತ ಬಸ್ ಯೋಜನೆ ಶೀಘ್ರ ಜಾರಿಗೊಳಿಸುವ ಬಗ್ಗೆ ಪ್ರತಿಭಟನೆಗಿಳಿದಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಗಳ ಸಂಖ್ಯೆ ಕಡಿಮೆಯಿದ್ದು, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ವ್ಯಾಪ್ತಿಯ ಬಹುತೇಕ ಬಸ್ಗಳು ಅಂತಾರಾಜ್ಯ ಸಂಚಾರ ನಡೆಸುತ್ತಿರುವುದರಿಂದ ಇಲ್ಲಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಹೆಚ್ಚಿನ ಪ್ರಯೋಜನಕ್ಕೆ ಬಾರದ ಸ್ಥಿತಿಯಿದೆ. ಈ ತಾಂತ್ರಿಕ ಸಮಸ್ಯೆಗೆ ಪರಿಹಾರಕಂಡುಕೊಳ್ಳುವಂತೆಯೂ ಆಗ್ರಹ ಕೇಳಿ ಬರಲಾರಂಭಿಸಿದೆ. ಕಾಸರಗೋಡು ಡಿಪೋದಲ್ಲಿ ಸಂಚಾರದಲ್ಲಿರುವ ಬಸ್ಗಳಲ್ಲಿ 40ರಷ್ಟು ಶಿಥಿಲಾವಸ್ಥೆಯಲ್ಲಿದ್ದು, ಗುಜರಿ ಸೇರುವ ಸನ್ನಾಹದಲ್ಲಿದೆ.
------------------------

