ಕಾಸರಗೋಡು: ಮುಂಗಾರುಮಳೆ ಜಿಲ್ಲೆಯಲ್ಲಿ ಬಿರುಸುಪಡೆದುಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸದುರ್ಗದ ಸಿಎಸ್ಐ ಇಗರ್ಜಿ ಆವರಣಗೋಡೆ ಕುಸಿದಿದೆ.
ಇದರಿಂದ ಭಾರೀ ಪ್ರಮಾಣದ ಮಣ್ಣು ಮತ್ತು ಕಲ್ಲು ರಸ್ತೆಯಲ್ಲಿ ದಾಸ್ತಾನುಗೊಂಡಿದೆ. ರಸ್ತೆಯ ಇನ್ನೊಂದು ಅಂಚಿಗೆ ತೆರಳಿದ್ದ ಜೆಸಿಬಿ ಹಾಗೂ ಇತರ ಎರಡು ವಾಹನಗಳು ಮಣ್ಣಿನ ಮಧ್ಯೆ ಸಿಲುಕಿಕೊಳ್ಳುವಂತಾಗಿದೆ. ಮಣ್ಣುಕುಸಿದು ರಸ್ತೆಗೆ ಬಿದ್ದಿರುವುದರಿಂದ ಹಲವು ಕ್ವಾಟ್ರಸ್ಗಳಿಗೆ ತೆರಳುವ ರಸ್ತೆ ಮುಚ್ಚುಗಡೆಗೊಂಡಿದ್ದು, ಇಲ್ಲಿನ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಅವೈಜ್ಞಾನಿಕವಾಗಿ ಆವರಣಗೋಡೆ ನಿರ್ಮಿಇಸಿರುವುದರಿಂದ ಕುಸಿದು ಬೀಳಲು ಕಾರಣವಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಬಿರುಸಿನ ಗಾಳಿ, ಮಳೆಗೆ ಮಧೂರು ಕ್ಷೇತ್ರ ಸನಿಹ ರಸ್ತೆ ಅಂಚಿಗೆ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಮರ ಉರುಳಿ ಹಾನಿ ಸಂಭವಿಸಿದೆ. ಶನಿವಾರ ಬಿರುಸಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ನಿರೀಕ್ಷಿತ ಮಳೆಯಾಗಿರಲಿಲ್ಲ. ರೆಡ್ ಅಲರ್ಟ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಶನಿವಾರ ಕಾಸರಗೋಡು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು.
ಚಿತ್ರ ಮಾಹಿತಿ: ನಿರಂತರ ಸುರಿದ ಮಳೆಗೆ ಹೊಸದುರ್ಗದ ಸಿಎಸ್ಐ ಇಗರ್ಜಿ ಆವರಣಗೋಡೆ ಕುಸಿದು ಅನಾಹುತ ಸಂಭವಿಸಿದೆ.
ಮಧೂರು ಕ್ಷೇತ್ರ ವಠಾರದ ರಸ್ತೆ ಅಂಚಿಗೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿ ಹಾನಿಗೀಡಾಗಿದೆ.

