ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅವ್ಯವಹಾರಗಳನ್ನು ವಿರೋಧಿಸಿ ಜೂನ್ 17ರಿಂದ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲಿದೆ. ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷವು ಶನಿವಾರ ಘೋಷಿಸಿದೆ.
'ರಾಜಸ್ಥಾನದ ಕೋಟಾದಿಂದಲೇ ಅಭಿಯಾನವನ್ನು ಆರಂಭಿಸಲಾಗುವುದು. ಅಭಿಯಾನವು ರಾಜಕೀಯದ ಆಚೆಗೆ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಲಿದೆ ಮತ್ತು ಸಂತ್ರಸ್ತ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳಲು ವೇದಿಕೆ ನೀಡಲಿದೆ. ನಿರಂತರ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವೈಫಲ್ಯಗಳಿಗೆ ಉತ್ತರದಾಯಿತ್ವಕ್ಕಾಗಿ ಆಗ್ರಹಿಸಲಿದೆ' ಎಂದು ತಿಳಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು, 'ಈ ಕುರಿತು ಸಂಸತ್ತಿನಲ್ಲಿ ಸಮಗ್ರವಾಗಿ ಚರ್ಚಿಸಲು ಕಾಂಗ್ರೆಸ್ ಆಗ್ರಹಿಸಲಿದೆ. ಯುವಜನರ ಹಿತಾಸಕ್ತಿ, ಹಕ್ಕುಗಳು ಮತ್ತು ಭವಿಷ್ಯದ ರಕ್ಷಣೆಗೆ ಒತ್ತಾಯಿಸಲಿದೆ' ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
'ರಾಹುಲ್ ಗಾಂಧಿ ಅವರು ಕೋಟಾ (ಜೂ. 17), ಅಲಹಾಬಾದ್ (ಜುಲೈ 10), ಪಟ್ನಾ (ಜುಲೈ 11), ದೆಹಲಿ (ಜುಲೈ 14)ಯಲ್ಲಿ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದು ತಿಳಿಸಿದ್ದಾರೆ.

