ಗುವಾಹಟಿ: ಅಕ್ರಮ ವಲಸಿಗರು ಆಧಾರ್ ಕಾರ್ಡ್ ಪಡೆಯುವುದನ್ನು ತಡೆಯುವ ಉದ್ದೇಶದಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಲು ಅಸ್ಸಾಂ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನೀಡಲು ಅವಕಾಶ ಇರಲಿದೆ ಎಂದರು.
ಅಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳು ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅರ್ಜಿದಾರರು ಆಧಾರ್ ಪಡೆಯಲು ಅರ್ಹರೇ ಎಂಬುದನ್ನು ಪರಿಶೀಲಿಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಧಾರ್ ನೋಂದಣಿಯು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಕೆಲವು ಜಿಲ್ಲೆಗಳಲ್ಲಿ ಆಧಾರ್ ವ್ಯಾಪ್ತಿಯು ಶೇ.100ಕ್ಕಿಂತಲೂ ಹೆಚ್ಚಾಗಿದೆ ಎಂದು ಶರ್ಮಾ ತಿಳಿಸಿದರು.
'ಶೇ.100ಕ್ಕಿಂತ ಹೆಚ್ಚು ಆಧಾರ್ ಕಾರ್ಡ್ಗಳು ಹೇಗೆ ವಿತರಿಸಲ್ಪಟ್ಟಿವೆ ಮತ್ತು ಹೆಚ್ಚುವರಿ ಕಾರ್ಡ್ಗಳನ್ನು ಪಡೆಯುತ್ತಿರುವವರು ಯಾರು ಎಂಬುದನ್ನು ನಾವು ಪರಿಶೀಲಿಸಬೇಕಿದೆ. ಯಾವುದೇ ಅಕ್ರಮ ಬಾಂಗ್ಲಾದೇಶಿ ವಲಸಿಗರು ಆಧಾರ್ ಕಾರ್ಡ್ ಪಡೆಯದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಅವರು ಹೇಳಿದರು.
ಆದರೂ, ಚಹಾ ತೋಟದ ಕಾರ್ಮಿಕ ಸಮುದಾಯ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗೆ ಆಧಾರ್ ಕಾರ್ಡ್ ವಿತರಣೆಯನ್ನು ಮುಂದುವರಿಸಲಾಗುವುದು. ಈ ಸಮುದಾಯಗಳ ಅನೇಕ ಮಂದಿಗೆ ಇನ್ನೂ ಆಧಾರ್ ಕಾರ್ಡ್ ದೊರೆತಿಲ್ಲ ಎಂದು ಅವರು ಹೇಳಿದರು.
'ಈ ವಿನಾಯಿತಿ ಎಪ್ರಿಲ್ 1, 2027ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಆ ದಿನಾಂಕದ ನಂತರ ಈ ಸಮುದಾಯಗಳಿಗೆ ಸೇರಿದ 18 ವರ್ಷ ಮೇಲ್ಪಟ್ಟವರಿಗೂ ಆಧಾರ್ ಕಾರ್ಡ್ ನೀಡಲಾಗುವುದಿಲ್ಲ' ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆಧಾರ್ ಕಾರ್ಡ್ಗಳನ್ನು ನೀಡುವುದನ್ನು ಮುಂದುವರಿಸಲಾಗುವುದು ಎಂದೂ ಅವರು ತಿಳಿಸಿದರು.
ಆಧಾರ್ ಕಾರ್ಡ್ ವಿತರಣೆಯಲ್ಲಿ ರಾಜ್ಯ ಸರ್ಕಾರ 'ಅತ್ಯಂತ ಕಟ್ಟುನಿಟ್ಟಿನ' ನಿಲುವು ಅನುಸರಿಸಲಿದೆ. ಅಸ್ಸಾಂನಲ್ಲಿ ಆಧಾರ್ ಕಾರ್ಡ್ ಪಡೆಯುವುದು ಸುಲಭವಾಗುವುದಿಲ್ಲ ಎಂದು ಶರ್ಮಾ ಈ ಹಿಂದೆಯೇ ಹೇಳಿದ್ದರು.
ಕಳೆದ ವರ್ಷವೂ ಬಾಂಗ್ಲಾದೇಶದಿಂದ ನಡೆಯುತ್ತಿರುವ ಅಕ್ರಮ ವಲಸೆಯನ್ನು ತಡೆಯುವ ಪ್ರಯತ್ನದ ಭಾಗವಾಗಿ, ವಯಸ್ಕರಿಗೆ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆಗೆ ಕಠಿಣ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದರು.

