ಲಖನೌ: ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಿಸಿದ್ದ, ಸುಮಾರು 200 ವರ್ಷಗಳಷ್ಟು ಹಳೆಯ ಮಸೀದಿಯನ್ನು ಉತ್ತರಪ್ರದೇಶದ ವಾರಾಣಸಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮೂಲಕ ತೆರವು ಮಾಡಲಾಗಿದೆ.
ಕಾಶಿ ರೈಲು ನಿಲ್ದಾಣದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿತ್ತು ಎನ್ನಲಾದ ಅಜ್ಗೈಬ್ ಶಹೀದ್ ಮಸೀದಿ, ಖಬರ್ಸ್ತಾನ(ಸ್ಮಶಾನ) ಮತ್ತು ಗೋರಿ ಸೇರಿದಂತೆ ಕಟ್ಟಡಗಳನ್ನು ಜೆಸಿಬಿ ಬಳಸಿ ಮಂಗಳವಾರ ರಾತ್ರಿ ಬಿಗಿ ಭದ್ರತೆಯಲ್ಲಿ ತೆರವು ಮಾಡಲಾಯಿತು.
ಒತ್ತುವರಿ ಜಾಗದಲ್ಲಿದ್ದ ಹನುಮಾನ್ ಮಂದಿರವನ್ನೂ ತೆರವು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
'ಕಾಶಿ ಮಾದರಿ ರೈಲು ನಿಲ್ದಾಣ ಯೋಜನೆ' ಕೈಗೆತ್ತಿಕೊಂಡಾಗ ಭೂ ಒತ್ತುವರಿ ಪತ್ತೆಯಾಗಿತ್ತು. ರೈಲ್ವೆ ಇಲಾಖೆ ಮಸೀದಿ ನಿರ್ವಹಿಸುತ್ತಿದ್ದ ವರಿಗೆ ಹಲವು ಬಾರಿ ನೋಟಿಸ್ ನೀಡಿತ್ತು. ಆದರೆ ಮಸೀದಿ ಆಡಳಿತ ಮಂಡಳಿ ನ್ಯಾಯಾಲಯದಲ್ಲಿ ನೋಟಿಸ್ ಪ್ರಶ್ನಿಸಿತ್ತು. ರೈಲ್ವೆ ಇಲಾಖೆ ಪರವಾಗಿ ನ್ಯಾಯಾಲಯ ಆದೇಶ ನೀಡಿತ್ತು.

