ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಕೋಲ್ಕತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ನೌಕಾಪಡೆಯ ಸ್ವದೇಶಿ ನಿರ್ಮಿತ ಮೂರು ಹಡಗುಗಳನ್ನು ದೇಶಕ್ಕೆ ಸಮರ್ಪಿಸಿದರು.
ಈ ನೌಕೆಗಳು ನೌಕಾಪಡೆಯ ಯುದ್ಧ, ಜಲ ಸಮೀಕ್ಷೆ ಮತ್ತು ಜಲಾಂತರ್ಗಾಮಿ ನಿರೋಧಕ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿವೆ.
ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಅಗೋಚರ ಯುದ್ಧ ನೌಕೆ 'ದುನಾಗಿರಿ', ಬೃಹತ್ ಸಮೀಕ್ಷಾ ನೌಕೆ 'ಸಂಶೋಧಕ್' ಮತ್ತು ಜಲಾಂತರ್ಗಾಮಿ ನಿರೋಧಕ ಸಣ್ಣ ಯುದ್ಧ ನೌಕೆ 'ಅಗ್ರಯ್' - ಈ ಮೂರು ನೌಕೆಗಳು.
ಈ ನೌಕೆಗಳ ಸೇರ್ಪಡೆಗೆ ಮುನ್ನ ಯೂಟ್ಯೂಬ್ನಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದ ನೌಕಾಪಡೆ, 'ದುನಾಗಿರಿ'ಯನ್ನು ಅತ್ಯಂತ ಶಕ್ತಿಶಾಲಿ ಮತ್ತು ಸುಧಾರಿತ ಯುದ್ಧನೌಕೆ ಎಂದು ಬಣ್ಣಿಸಿತ್ತು.
'ದುನಾಗಿರಿ' ಯುದ್ಧ ನೌಕೆ ಬ್ರಹ್ಮೋಸ್ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಗಳು ಮತ್ತು ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಸೆನ್ಸಾರ್ಗಳನ್ನು ಹೊಂದಿದ್ದು, ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.
ನಾಲ್ಕನೇ ಬೃಹತ್ ಸಮೀಕ್ಷಾ ನೌಕೆಯಾಗಿರುವ 'ಸಂಶೋಧಕ್' ಅನ್ನು ಕರಾವಳಿ ಮತ್ತು ಆಳ ಸಮುದ್ರದ ಜಲ ಸಮೀಕ್ಷೆಗಳಿಗಾಗಿ ಹಾಗೂ ರಕ್ಷಣೆ ಮತ್ತು ನಾಗರಿಕ ಬಳಕೆಗಾಗಿ ಸಾಗರಶಾಸ್ತ್ರ ಮತ್ತು ಭೂಭೌತಿಕ ದತ್ತಾಂಶಗಳನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂಚಾಲಿತ ಅಂಡರ್ವಾಟರ್ ವೆಹಿಕಲ್ಸ್ ಮತ್ತು ರಿಮೋಟ್ ಚಾಲಿತ ವೆಹಿಕಲ್ಸ್ ಸೇರಿದಂತೆ ಸಮೀಕ್ಷಾ ವ್ಯವಸ್ಥೆಗಳನ್ನು ಹೊಂದಿದೆ.
ಇನ್ನು ಅರ್ನಾಲಾ ವರ್ಗದ ನಾಲ್ಕನೇ ಜಲಾಂತರ್ಗಾಮಿ ನಿರೋಧಕ ಆಳವಿಲ್ಲದ ನೀರಿನ ನೌಕೆಯಾಗಿರುವ 'ಅಗ್ರಯ್' ಲಘು ತೂಕದ ಟಾರ್ಪಿಡೊಗಳು, ಸ್ವದೇಶಿ ರಾಕೆಟ್ ಲಾಂಚರ್ಗಳು ಮತ್ತು ಆಳವಿಲ್ಲದ ನೀರಿನ ಸೋನಾರ್ ವ್ಯವಸ್ಥೆಗಳನ್ನು ಹೊಂದಿದ್ದು, ಕರಾವಳಿ ತೀರದ ನೀರಿನಲ್ಲಿ ಅಡಗಿರುವ ಜಲಾಂತರ್ಗಾಮಿ ಅಪಾಯಗಳನ್ನು ಪತ್ತೆಹಚ್ಚಿ ಮಟ್ಟಹಾಕಬಲ್ಲದು.
ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೊ ಮತ್ತು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆಯಂಡ್ ಎಂಜಿನಿಯರ್ಸ್ (GRSE) ಸಂಸ್ಥೆಗಳು ಈ ನೌಕೆಗಳನ್ನು ವಿನ್ಯಾಸಗೊಳಿಸಿದ್ದು, GRSE ಇದನ್ನು ನಿರ್ಮಿಸಿದೆ.

