ನವದೆಹಲಿ: 'ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರ ಅಂಗವೈಕಲ್ಯದ ಪ್ರಮಾಣವನ್ನು ಮಾತ್ರ ಪರಿಗಣಿಸದೆ ಆ ವ್ಯಕ್ತಿಯ ವೃತ್ತಿ ಮತ್ತು ಅದರಿಂದ ಬರುತ್ತಿದ್ದ ಆದಾಯಕ್ಕೆ ಆದ ನಷ್ಟವನ್ನೂ ಗಣನೆಗೆ ತೆಗೆದುಕೊಂಡು ಪರಿಹಾರವನ್ನು ಲೆಕ್ಕಾಚಾರ ಮಾಡಬೇಕು' ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಸ್ತೆ ಅಪಘಾತಗಳಲ್ಲಿ ಶ್ವಾಶತವಾಗಿ ಅಂಗವಿಕಲರಾದವರಿಗೆ ಈ ತೀರ್ಪಿನಿಂದ ಬಹಳ ಅನುಕೂಲವಾಗಲಿದೆ.
ಬಡಗಿ ಕೆಲಸ ಮಾಡುತ್ತಿದ್ದ ಶಂಕರ್ ದತ್ ಎಂಬುವರಿಗೆ 2004ರಲ್ಲಿ ಅಪಘಾತವಾಗಿತ್ತು. ಅತಿವೇಗವಾಗಿ ಬಂದ ಜೀಪ್ವೊಂದು ದತ್ ಅವರ ಬೈಕ್ಗೆ ಗುದ್ದಿತ್ತು. ಅಪಘಾತದಿಂದ ಬಲಗಾಲಿನ ಮಂಡಿಯಿಂದ ಕೆಳಗಿನ ಭಾಗವನ್ನು ದತ್ ಅವರು ಕಳೆದುಕೊಂಡರು. ಇವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ನಡೆಸಿತು.
ದತ್ ಅವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದಾಗಿನಿಂದ ಆರಂಭಗೊಂಡು ತೀರ್ಪು ಬರುವಲ್ಲಿವರೆಗಿನ ದಿನದವರಗೆ ಲೆಕ್ಕಾಚಾರ ಮಾಡಿ, ದತ್ ಅವರಿಗೆ ನೀಡುವ ಪರಿಹಾರದ ಮೊತ್ತವನ್ನು ₹35.95 ಲಕ್ಷಕ್ಕೆ ಹೆಚ್ಚಿಸಿದೆ. ಈ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ 6ರಷ್ಟು ಬಡ್ಡಿ ಸೇರಿಸಿ ಕೊಡಬೇಕು ಎಂದೂ ಪೀಠ ಹೇಳಿದೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು ದತ್ ಅವರಿಗೆ ₹4.77 ಲಕ್ಷ ಪರಿಹಾರ ಘೋಷಿಸಿತ್ತು. ಬಳಿಕ, ದತ್ ಅವರು ಉತ್ತರಾಖಂಡ ಹೈಕೋರ್ಟ್ ಮೆಟ್ಟಿಲೇರಿದರು. ಪರಿಹಾರ ಮೊತ್ತವನ್ನು ₹11.51 ಲಕ್ಷಕ್ಕೆ ಏರಿಸಿ ಆದೇಶಿಸಲಾಗಿತ್ತು. 'ಕಾಲು ಕತ್ತರಿಸಿದ್ದರಿಂದ ನನಗೆ ನನ್ನ ವೃತ್ತಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರಿಹಾರ ಮೊತ್ತ ಹೆಚ್ಚಿಸಿ' ಎಂದು ಕೋರಿ ದತ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
'ದತ್ ಅವರ ಅಂಗವೈಕಲ್ಯದ ಪ್ರಮಾಣವು ಶೇ 70ರಷ್ಟಿದೆ ಎಂದು ವೈದ್ಯಕೀಯ ಪ್ರಮಾಣಪತ್ರ ನೀಡಲಾಗಿದೆ. ಆದರೆ, ಈ ಪ್ರಮಾಣವು ಅವರಿಗಾದ ಆರ್ಥಿಕ ನಷ್ಟವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಆದ್ದರಿಂದ ಅವರ ಅಂಗವೈಕಲ್ಯದ ಪ್ರಮಾಣವನ್ನು ಶೇ 100 ಎಂದೇ ಪರಿಗಣಿಸಬೇಕಾಗುತ್ತದೆ' ಎಂದು ಪೀಠ ಹೇಳಿತು.
ಸುಪ್ರೀಂ ಕೋರ್ಟ್ ಪೀಠವೈದ್ಯಕೀಯ ವೆಚ್ಚ, ಆದಾಯ ನಷ್ಟದ ಜೊತೆಗೆ, ಭವಿಷ್ಯದ ದೃಷ್ಟಿಯಿಂದಲೂ ಪರಿಹಾರವನ್ನು ಲೆಕ್ಕಾಚಾರ ಮಾಡಬೇಕು. ಸಮಾನ್ಯ ಜೀವನ ನಡೆಸಲು ಕಷ್ಟವಾಗುವಂಥ ಸ್ಥಿತಿ, ಕಾಲು ಕಳೆದುಕೊಂಡಿದ್ದರಿಂದ ಆದ ನೋವು, ಭಯ ಮತ್ತು ಸಂಕಟವನ್ನೂ ಪರಿಗಣಿಸಬೇಕು.

