ಶ್ರೀನಗರ: ಪಾರದರ್ಶಕ ಚುನಾವಣೆಗಳನ್ನು ನಡೆಸುವ ಮೂಲಕ ಭಾರತವು ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೋಮವಾರ ಹೇಳಿದ್ದಾರೆ.
ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 'ಪಾರದರ್ಶಕ ಚುನಾವಣೆ ನಡೆಸಲು ಅವಶ್ಯವಿರುವ ಮತದಾರರ ಪಟ್ಟಿ ಸಿದ್ಧಪಡಿಸುವುದು, ಮತದಾನ ನಡೆಸುವುದು ಮತ್ತು ಮತ ಎಣಿಕೆ ಪ್ರಕ್ರಿಯೆ ಕುರಿತು ನಾವು ಚರ್ಚಿಸುತ್ತಿದ್ದೇವೆ.
ಇದರ ಪ್ರತಿಯೊಂದು ಹಂತವನ್ನು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸ್ಥೂಲವಾಗಿ ಪರಿಶೀಲಿಸುತ್ತಾರೆ' ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಶ್ರೀನಗರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಮತಗಟ್ಟೆ ಅಧಿಕಾರಿಗಳನ್ನು(ಬಿಎಲ್ಒ) ಉದ್ದೇಶಿಸಿ ಮಾತನಾಡಿದ್ದಾರೆ.
'ಪ್ರಸ್ತುತ ಭಾರತವು 'ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಅಂಡ್ ಎಲೆಕ್ಟೋರಲ್ ಅಸಿಸ್ಟೆನ್ಸ್' ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಗಮನಿಸಿದರೆ, ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ' ಎಂದಿದ್ದಾರೆ.
ಇದೇ ವೇಳೆ, ಬಿಎಲ್ಒಗಳನ್ನು ಪ್ರಜಾಪ್ರಭುತ್ವದ ಸ್ತಂಭಗಳು ಎಂದು ಬಣ್ಣಿಸಿದ್ದಾರೆ.
'ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಮತದಾರರಿಗೆ ನನ್ನ ಶುಭಾಶಯಗಳು. ಎಲ್ಲಾ ಬಿಎಲ್ಒಗಳು, ಎಇಆರ್ಒಗಳು, ಇಆರ್ಒಗಳು ಮತ್ತು ಡಿಇಆರ್ಒಗಳಿಗೆ ನನ್ನ ವಂದನೆಗಳು' ಎಂದು ಹೇಳಿದ್ದಾರೆ.

