ಮಂಜೇಶ್ವರ: ಆರೋಗ್ಯವೇ ಭಾಗ್ಯ ಎಂಬ ಧೈಯದೊಂದಿಗೆ ಇನ್ಫೆಂಟ್ ಜೀಸಸ್ ಸೈರೊ ಮಲಬಾರ್ ಚರ್ಚ್ ಹೊಸಂಗಡಿ ಇದರ ಆಶ್ರಯದಲ್ಲಿ, ರಿಯಲ್ ಲ್ಯಾಬ್ ಹೊಸಂಗಡಿಯ ನೇತೃತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಭಾನುವಾರ ಬೆಳಗ್ಗೆ ಚರ್ಚ್ ನಲ್ಲಿ ನಡೆಯಿತು.
ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದಾಗಿ ದೇಹ ರಕ್ಷಣೆ ಮತ್ತು ಸೂಕ್ತ ಚಿಕಿತ್ಸೆ ಅತ್ಯಂತ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯಕರ ಜೀವನ ನಡೆಸಲು ಚರ್ಚ್ ಆಡಳಿತ ಮಂಡಳಿ ವೈದ್ಯಕೀಯ ಶಿಬಿರ ನಡೆಸುವ ಮೂಲಕ ಜಾಗೃತಿ ಮೂಡಿಸಿರುವುದು ಶ್ಲಾಘನೀಯವಾಗಿದೆ ಎಂದು ರಿಯಲ್ ಲ್ಯಾಬ್ ನ ವೈದ್ಯ ಸಚಿನ್ ವರ್ಗೀಸ್ ಶಿಬಿರ ಉದ್ಘಾಟಿಸಿ ತಿಳಿಸಿದರು.
ಚರ್ಚ್ ನ ಫಾದರ್ ಲೂಯಿಸ್ ಮರಿಯಾ ದಾಸ್ ರವರು ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಿಯಲ್ ಲ್ಯಾಬ್ ನ ಸ್ಥಾಪಕಿ ಜಯ ಶರ್ಮಿಳಾ ಉಪ್ಪಳ, ವೈದ್ಯರುಗಳಾದ ಡಾ. ಸಚಿನ್, ಸಜಿ ವರ್ಗೀಸ್ ಉಪಸ್ಥಿತರಿದ್ದರು. ಬಳಿಕ ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣೆ ನುರಿತ ವೈದ್ಯರುಗಳಿಂದ ನೆರವೇರಿತು. ಮುಂದಿನ ದಿನಗಳಲ್ಲಿ ಚರ್ಚ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಿವಿ, ಕಣ್ಣು, ಹಲ್ಲು, ಹಾಗೂ ಹೃದ್ರೋಗ ಶಿಬಿರಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಮುಂದೆ ತಿಳಿಸಲಾಗುವುದುದೆಂದು ಚರ್ಚ್ ನ ಆಡಳಿತ ಮಂಡಳಿ ತಿಳಿಸಿದೆ.

.jpg)
.jpg)
.jpg)
