ಕಾಸರಗೋಡು: ಜಿಲ್ಲೆಯಲ್ಲಿ ಈ ವರ್ಷದ ಓಣಂ ಆಚರಣೆಗೆ ಅಗತ್ಯವಿರುವ ಹೂವುಗಳನ್ನು ಒದಗಿಸುವ ಗುರಿಯೊಂದಿಗೆ, ಕಾಞಂಗಾಡ್ ನಗರಸಭೆಯಲ್ಲಿ ಚೆಂಡು ಮಲ್ಲಿಗೆ ಕೃಷಿ ಆರಂಭಿಸಲಾಗಿದೆ. ನಗರಸಭೆಯ ನೌಕರರು ಮತ್ತು ಶುಚಿತ್ವ ಇಲಾಖೆಯ ನೌಕರರ ಗುಂಪಿನ ಸಿಬ್ಬಂದಿ ಮಂಡಳಿಯ ನೇತೃತ್ವದಲ್ಲಿ ಹೂವಿನ ಕೃಷಿಯನ್ನು ಪ್ರಾರಂಭಿಸಲಾಯಿತು.
ನಗರಸಭಾಂಗಣ ವಠಾರದ ನೆಹರೂ ಪಾರ್ಕಿನ ನೆಹರು ಸ್ಮೃತಿ ಮಂಟಪ ಸಮೀಪದ ಜಾಗದಲ್ಲಿ ಚೆಂಡು ಮಲ್ಲಿಗೆ ಸಸಿಗಳನ್ನು ನೆಡಲಾಯಿತು.
ನಗರಸಭಾ ಅಧ್ಯಕ್ಷ ವಿ.ವಿ. ರಮೇಶ್ ಅವರು ಚೆಂಡುಮಲ್ಲಿಗೆ ಸಸಿ ನೆಡುವ ಮೂಲಕ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ, ಕಾಞಂಗಾಡು ನಗರಸಭೆಯು ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸಲು ಮತ್ತು ಅವುಗಳನ್ನು ತ್ಯಾಜ್ಯ ಮುಕ್ತವಾಗಿಡಲು ನಡೆಸುತ್ತಿರುವ ನಿರಂತರ ಪ್ರಯತ್ನದ ಜತೆಗೆ ಚೆಂಡುಹೂವು ಬೆಳೆಸುವ ಯೋಜನೆಯನ್ನೂ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಗರಸಭೆಯ ಅತ್ಯುತ್ತಮ ಶುಚಿತ್ವ ಪ್ರಜ್ಞೆಯುಳ್ಳ ವಾರ್ಡ್ ಮತ್ತು ಮನೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷೆ ಲತಾ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಲತಾ ಬಾಲಕೃಷ್ಣನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಫೌಜಿಯಾ ಷರೀಫ್, ನಗರಸಭಾ ಸದಸ್ಯರಾದ ಸಂತೋಷ್ ಕುಶಾಲ್ ನಗರ, ರಾಜನ್ ಅತಿಕೋತ್, ಸೆವೆನ್ ಸ್ಟಾರ್ ಅಬ್ದುಲ್ ರಹಿಮಾನ್, ಮೊಯ್ದು ಪಂಜಾಬಿ, ಸೇತು ಕಾಞಂಗಾಡ್, ಎಂ.ಬಾಲರಾಜ್, ಒಪಾರ ಅಸೋಸಿಯೇಷನ್ ಅಧ್ಯಕ್ಷ ಎನ್.ವಿ.ದಿವಾಕರನ್, ಕಾರ್ಯದರ್ಶಿ ರಾಕೇಶ್ ನಾರಾಯಣನ್, ನಗರಸಭಾ ಸದಸ್ಯರು, ನೌಕರರು ಉಪಸ್ಥಿತರಿದ್ದರು. ನಗರಸಭೆ ಕಾರ್ಯದರ್ಶಿ ಎಂ.ಕೆ. ಗಿರೀಶ್ ಸ್ವಾಗತಿಸಿದರು ಮತ್ತು ವಾರ್ಡ್ ಕೌನ್ಸಿಲರ್ ಪಿ.ವಿ. ಚಂದ್ರನ್ ಮಾಸ್ಟರ್ ವಂದಿಸಿದರು.



