ಕಾಸರಗೋಡು: ಹಿಂದುಳಿದ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಭಾಕರನ್ ಆಯೋಗದ ನಿರ್ದೇಶನದಂತೆ ಕೇರಳ ಸರ್ಕಾರ ಜ್ಯಾರಿಗೊಳಿಸಿದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿಗೆ ಜಿಲ್ಲಾಭಿವೃದ್ಧಿಯ ದೃಷ್ಟಿಯಲ್ಲಿ ಹೆಚ್ಚುವರಿ ೧೦೦ ಕೋಟಿ ರೂ ಮಂಜೂರುಗೊಳಿಸುವಂತೆ ಕಾಸರಗೋಡು ಜಿಲ್ಲಾ ಪಂಚಾಐಇತಿ ಅಧ್ಯಕ್ಷರ ನೇತೃತ್ವದ ನಿಯೋಗ ತಿರುವನಂತಪುರದಲ್ಲಿ ಮುಖ್ಯಮಂತ್ರಿ ವಿ.ಡಿ ಸತೀಶನ್ ಹಾಗೂ ವಿವಿಧ ಇಲಾಖಾ ಸಚಿವರನ್ನು ಭೇಟಿಯಾಗಿ ಮನವಿ ಮೂಲಕ ಒತ್ತಾಯಿಸಿದೆ.
ಕಾಸರಗೋಡು ಜಿಲ್ಲೆಯ ಸಮಸ್ಯೆ ಮತ್ತು ಪ್ರಮುಖ ಬೇಡಿಕೆಗಳನ್ನು ಆಲಿಸಿದ ಮುಖ್ಯಮಂತ್ರಿ ಗೌರವ ಪೂರ್ವಕ ಪರಿಗಣಿಸುವ ಭರವಸೆ ನೀಡಿರುವುದಾಗಿ ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳು ತಿಳಿಸಿದ್ದಾರೆ.
ಮಳೆಗಾಲ ರೋಗಗಳ ಸಹಿತ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಗಣನೀಯ ಹೆಚ್ಚುತ್ತಿದೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಕಾಸರಗೋಡಿನ ಸರ್ಕಾರಿ ಚಿಕಿತ್ಸಾ ಕೇಂದ್ರಗಳಲ್ಲಿ ೧೪೩ ವೈದ್ಯರ ಕೊರತೆ ಇದ್ದು, ಇದನ್ನು ತುರ್ತು ಭರ್ತಿ ಮಾಡುವುದರೊಂದಿಗೆ ಜಿಲ್ಲಾಸ್ಪತ್ರೆಗೆ ಫಾರೆನ್ಸಿಕ್ ಸರ್ಜನ್ ರನ್ನು ನೇಮಿಸಬೇಕೆಂದು ಸಚಿವ ಸಂಪುಟವನ್ನು ಒತ್ತಾಯಿಸಲಾಗಿದೆ. ಆರೋಗ್ಯ ವಲಯದ ಸಂದಿಗ್ಧತೆ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸಿ ಪರಿಹಾರ ಒದಗಿಸಲಾಗುವುದೆಂದು ಆರೋಗ್ಯ ಸಚಿವ ಕೆ. ಮುರಳೀಧರನ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಜಿ. ಪಂ. ಆಶ್ರಯದ ಸೀಡ್ ಫಾಂ ಅಭಿವೃದ್ದಿ, ಕಾಸರಗೋಡಿಗೆ ನೂತನ ಮಣ್ಣು ಪರಿಶೋಧನಾ ಕೇಂದ್ರ, ಟಾಟಾ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಬಡ್ತಿಗೊಳಿಸುವುದು, ಜಿಲ್ಲೆಯ ಕೆಲವು ಪ್ರಮುಖ ರಸ್ತೆಗಳನ್ನು ಪಿಡಬ್ಲೂö್ಯಡಿ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
ಜಿಲ್ಲೆಯ ಶಾಸಕರಾದ ಎಕೆಎಂ ಅಶ್ರಫ್, ಗೋವಿಂದನ್ ಪಳ್ಳಿಕ್ಕಾಪಿಲ್, ಜಿ. ಪಂ. ಉಪಾಧ್ಯಕ್ಷೆ ಕು. ಸೋಯ, ಸ್ಥಾಯೀ ಸಮಿತಿ ಸದಸ್ಯ ಎಂ. ಮನು, ಜಿ. ಪಂ. ಸದಸ್ಯರಾದ ಅಜೀಜ್ ಕಳತ್ತೂರ್, ಸೋಮಶೇಖರ ಜೆ. ಎಸ್, ಜಿ. ಪಂ. ಕಾರ್ಯದರ್ಶಿ ಎಸ್. ಬಿಜು ಮೊದಲಾದವರು ನಿಯೋಗದಲ್ಲಿದ್ದರು.

