ಕಾಸರಗೋಡು: ಉತ್ತರ ಮಲಬಾರ್ ಪ್ರದೇಶದ ವಿದ್ಯುತ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇರಳದ 400 ಕೆವಿ ಉಡುಪಿ-ಕರಿಂದಲಂ ಅಂತಾರಾಜ್ಯ ವಿದ್ಯುತ್ ಪ್ರಸರಣ ಮಾರ್ಗದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಯೋಜನೆಯ ಅಂಗವಾಗಿ, ಜಿಲ್ಲೆಯ ಮೂಲಕ ಹಾದುಹೋಗುವ ವಿಭಾಗದಲ್ಲಿನ ಎಲ್ಲಾ ಗೋಪುರಗಳ ನಿರ್ಮಾಣಕಾರ್ಯ ಪೂರ್ಣಗೊಂಡಿದೆ. ನಿರ್ಮಾಣ ಕಾರ್ಯದ ಜೊತೆಗೆ, ಕೃಷಿಕರು ಮತ್ತು ಭೂಮಾಲೀಕರಿಗೆ ಪರಿಹಾರ ವಿತರಣೆಯೂ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಹಾದುಹೋಗುವ 47.26 ಕಿ.ಮೀ. ಮಾರ್ಗದ ಟವರ್ ನಿರ್ಮಾಣ ಕಾರ್ಯವು ಶೇ. 100 ರಷ್ಟು ಪೂರ್ಣಗೊಂಡಿದ್ದು, ಟವರ್ಗಳನ್ನು ಸಂಪರ್ಕಿಸುವ ವಿದ್ಯುತ್ ತಂತಿ ಅಳವಡಿಸುವ ಕೆಲಸ ಪ್ರಸ್ತುತ ಪ್ರಗತಿಯಲ್ಲಿದೆ. ಒಟ್ಟು 47.26 ಕಿ.ಮೀ. ಮಾರ್ಗದಲ್ಲಿ, 42.759 ಕಿ.ಮೀ. ವರೆಗೆ ಈಗಾಗಲೇ ವಿದ್ಯುತ್ ತಂತಿ ಅಳವಡಿಸುವ ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸ ಪೂರ್ಣಗೊಂಡ ನಂತರ ಯೋಜನೆ ಕಾರ್ಯಾರಂಭಗೊಳ್ಳಲಿದೆ.
ರಾಜ್ಯ ಸರ್ಕಾರ ಅನುಮೋದಿಸಿದ ವಿಶೇಷ ಪ್ಯಾಕೇಜ್ ಪ್ರಕಾರ, ಯೋಜನೆಗಾಗಿ ಭೂಮಿ ಬಿಟ್ಟುಕೊಟ್ಟವರಿಗೆ ಪರಿಹಾರ ವಿತರಣಾಕಾರ್ಯವೂ ನಡೆಯುತ್ತಿದ್ದು, ವಿದ್ಯುತ್ ಟವರ್ ಹಾದುಹೋಗುವ ಪ್ರದೇಶದಲ್ಲಿ ತೆರವುಗೊಳಿಸಿರುವ ಮರಗಳಿಗೆ ಪರಿಹಾರವಾಗಿ ಸಂಬಂಧಪಟ್ಟ ಭೂಮಾಲೀಕರಿಗೆ 90 ಕೋಟಿ ರೂ. ವಿತರಿಸಲಾಗಿದೆ. ಈ ನಿಟ್ಟಿನಲ್ಲಿ ಐದು ಕೋಟಿ ರೂ. ನೀಡಲು ಬಾಕಿಯಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಗಾಗಿ ವಶಪಡಿಸಿಕೊಳ್ಳಲಾಗಿರುವ ಭೂಮಿಯ ಒಟ್ಟು ಮೌಲ್ಯ 40 ಕೋಟಿ ರೂ. ಅಂದಾಜಿಸಲಾಗಿದ್ದು, ಇದರಲ್ಲಿ 70 ಲಕ್ಷ ರೂ.ಗಳನ್ನು ಭೂಮಾಲೀಕರಿಗೆ ವರ್ಗಾಯಿಸಲಾಗಿದೆ. ಕೇಂದ್ರ ವಿದ್ಯುತ್ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಈ ಯೋಜನೆಯ ನಿರ್ಮಾಣವನ್ನು ಸ್ಟಾರ್ಲೈಟ್ ಪವರ್ ಟ್ರಾನ್ಟ್ಮಿಷನ್ ಲಿಮಿಟೆಡ್ ಅಧೀನದಲ್ಲಿ ವಿಶೇಷ ಕಂಪನಿಯಾದ ಉಡುಪಿ ಕಾಸರಗೋಡು ಟ್ರಾನ್ಸ್ಮಿಷನ್ ಲಿಮಿಟೆಡ್(ಯುಕೆಟಿಎಲ್) ನಿರ್ವಹಿಸುತ್ತಿದೆ.
ಒಟ್ಟು 115 ಕಿ.ಮೀ ಉದ್ದದ ಉಡುಪಿ-ಕರಿಂದಲಂ ಅಂತಾರಾಜ್ಯ ವಿದ್ಯುತ್ ಪ್ರಸರಣ ಮಾರ್ಗದಲ್ಲಿ 47 ಕಿ.ಮೀ ಕೇರಳದಲ್ಲಿ ಹಾದುಹೋಗುತ್ತಿದೆ. ಕರಿಂದಳಂನಲ್ಲಿ ಸಬ್ಸ್ಟೇಷನ್ ನಿರ್ಮಾಣವೂ ಪೂರ್ಣಗೊಂಡಿದೆ. ನಿರ್ಮಾಣ ಮತ್ತು ವಿಶೇಷ ಪ್ಯಾಕೇಜ್ಗೆ ಯುಕೆಟಿಎಲ್ ಸ್ವತಃ ಆರ್ಥಿಕ ಜವಾಬ್ದಾರಿಯನ್ನು ಹೊಂದಿದೆ. ಈ ಮಹತ್ವದ ವಿದ್ಯುತ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ದೇಶಕ್ಕೆ ಸಮರ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


