ನವದೆಹಲಿ: ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಗೆ ನೇಮಕಾತಿ ಮಾಡುವ ಹಕ್ಕಿನಿಂದ ವಿವಾಹಿತ ಹೆಣ್ಣುಮಕ್ಕಳನ್ನು ಹೊರಗಿಡುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
'ಕುಟುಂಬ'ದ ವ್ಯಾಖ್ಯಾನದಿಂದ ವಿವಾಹಿತ ಪುತ್ರಿಯರನ್ನು ಹೊರಗಿಡುವುದು ನ್ಯಾಯಸಮ್ಮತವಲ್ಲ ಮತ್ತು ಸಾಂವಿಧಾನಿಕವಾಗಿ ಅದು ಸಿಂಧುವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅನುಕಂಪದ ಆಧಾರದಲ್ಲಿ ನೇಮಕಾತಿ ವಿಚಾರವಾಗಿ ವಿವಾಹಿತ ಪುತ್ರಿಯನ್ನು ಕುಟುಂಬದ ವ್ಯಾಖ್ಯಾನದಿಂದ ಹೊರಗಿಟ್ಟು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು ವಜಾ ಮಾಡಿತು.
ನ್ಯಾಯಬೆಲೆ ಅಂಗಡಿಯೊಂದರ ವಿತರಕ (ಡೀಲರ್) ಮೃತರಾದ ಬಳಿಕ ಅವರ ಪುತ್ರಿಯು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿತು.
'ಅವಲಂಬನೆ, ಹಣಕಾಸಿನ ಅಗತ್ಯ, ವಸತಿ ಹಾಗೂ ಡೀಲರ್ಶಿಪ್ಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ನಿರ್ವಹಿಸುವ ಅರ್ಜಿದಾರರ ಸಾಮರ್ಥ್ಯವನ್ನು ಪರಿಗಣಿಸಬೇಕಾಗುತ್ತದೆ. ಅವಲಂಬನೆಯು ವಾಸ್ತವದ ಪ್ರಶ್ನೆಯಾಗಿದ್ದು, ಮದುವೆಯಾದ ಮಾತ್ರಕ್ಕೆ ಮಗಳು ಆಕೆಯ ತವರಿನೊಂದಿಗಿನ ಬಾಂಧವ್ಯವನ್ನು ಕಡೆದುಕೊಳ್ಳುವುದಿಲ್ಲ ಅಥವಾ ತವರು ಕುಟುಂಬದ ಮೇಲೆ ಆಕೆ ಅವಲಂಬನೆ ಹೊಂದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಹೆಚ್ಚಿನ ಸಂದರ್ಭಗಳಲ್ಲಿ ಪುತ್ರರು ಕುಟುಂಬದ ವ್ಯಾಖ್ಯಾನಕ್ಕೆ ಒಳಪಟ್ಟಿದ್ದರೂ ಕುಟುಂಬದ ಮೇಲೆ ಅವಲಂಬಿತರಾಗಿರುವುದಿಲ್ಲ' ಎಂದು ಪೀಠವು ಹೇಳಿದೆ.
'ಮದುವೆಯಾದ ಹೊರತಾಗಿಯೂ ಪುತ್ರರನ್ನು ಕುಟುಂಬದ ವ್ಯಾಖ್ಯಾನದಿಂದ ಕಾಯ್ದೆಯು ಹೊರಗಿಡುವುದಿಲ್ಲ. ಆದರೆ ಅದೇ ಕಾರಣಕ್ಕೆ ಹೆಣ್ಣುಮಕ್ಕಳನ್ನು ಹೊರಗಿಡಲಾಗುತ್ತದೆ. ಮದುವೆಯಾದ ಹೆಣ್ಣುಮಕ್ಕಳು ಬೇರೆ ಕುಟುಂಬದ ಭಾಗವಾಗುತ್ತಾರೆ ಹಾಗೂ ತವರು ಕುಟುಂಬದೊಂದಿಗಿನ ಎಲ್ಲ ಬಾಂಧವ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಹಳೆಯಕಾಲದ ಲಿಂಗ ತಾರತಮ್ಯ ಧೋರಣೆ ಇಲ್ಲಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ಆಶಯಕ್ಕೆ ವಿರುದ್ಧವಾದದ್ದು' ಎಂದೂ ಅಭಿಪ್ರಾಯಪಟ್ಟಿದೆ.
'ವಿವಾಹಿತ ಪುತ್ರಿ ತವರು ಮನೆಯ ಅಗತ್ಯಗಳನ್ನು ಪೂರೈಸದೇ ಇರಬಹುದು' ಎಂಬ ರಾಜ್ಯದ ವಾದವನ್ನು 'ಅಸಮರ್ಥನೀಯ' ಎಂದು ಹೇಳಿದ ಪೀಠವು, 'ಅರ್ಜಿದಾರರು ಮದುವೆಯಾದ ಬಳಿಕವೂ ಅದೇ ಊರಿನಲ್ಲಿ ಇದ್ದುಕೊಂಡು ನ್ಯಾಯಬೆಲೆ ಅಂಗಡಿಯ ಕಾರ್ಯಾಚರಣೆಯಲ್ಲಿ ತಾಯಿಗೆ ಸಕ್ರಿಯವಾಗಿ ಸಹಕಾರ ನೀಡಿದ್ದಾರೆ. ತಾಯಿಯ ಸಾವಿನ ಬಳಿಕ ಅಂಧರೊಬ್ಬರೂ ಸೇರಿದಂತೆ ಸಹೋದರಿಯರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಹೇಳಿದೆ.
'ಅನುಕಂಪದ ಆಧಾರದ ನೇಮಕಾತಿ ಕೋಟಾವು ಉತ್ತರಾಧಿಕಾರದ ಹಕ್ಕನ್ನು ಅಥವಾ ಡೀಲರ್ಶಿಪ್ನಲ್ಲಿ ಆನುವಂಶೀಯ ಹಕ್ಕು ಸ್ಥಾಪಿಸುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ಮೃತ ಡೀಲರ್ ಅವರ ಅವಲಂಬಿತ ಕುಟುಂಬಕ್ಕೆ ತಕ್ಷಣದ ಹಣಕಾಸು ಪರಿಹಾರ ಒದಗಿಸುವುದು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಿರಂತರತೆ ಖಚಿತಪಡಿಸಿಕೊಳ್ಳುವುದೇ ಆಗಿದೆ' ಎಂದು ಸ್ಪಷ್ಟಪಡಿಸಿದೆ.
'ಉನ್ನತ ಶೈಕ್ಷಣಿಕ ಅರ್ಹತೆ ಮುಚ್ಚಿಟ್ಟರೆ ಉದ್ಯೋಗಿ ವಜಾ ಸಾಧ್ಯವೇ?'
ನಿರ್ದಿಷ್ಟ ಉದ್ಯೋಗಕ್ಕೆ ಅಗತ್ಯವಿರುವ ಅರ್ಹತೆಗಿಂತ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವುದನ್ನು ಮುಚ್ಚಿಟ್ಟರೆ ಸರ್ಕಾರಿ ಉದ್ಯೋಗಿಯನ್ನು ಸೇವೆಯಿಂದ ವಜಾ ಮಾಡಬಹುದೇ ಎಂಬ ವಿಚಾರವಾಗಿ ತೆಲಂಗಾಣ ಹೈಕೋರ್ಟ್ ಆದೇಶವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ.
'ಸಹಾಯಕನ ಹುದ್ದೆಗೆ ನೇಮಕವಾಗಿದ್ದ ಪರಿಶಿಷ್ಟ ಪಂಗಡದ ವ್ಯಕ್ತಿಯೊಬ್ಬರು ಅಗತ್ಯ ವಿದ್ಯಾರ್ಹತೆಯಾದ '10ನೇ ತರಗತಿ ಉತ್ತೀರ್ಣ'ದ ಬದಲಾಗಿ ಇಂಟರ್ ಮೀಡಿಯೇಟ್ ಶಿಕ್ಷಣ ಪೂರೈಸಿದ್ದರೂ ಅದನ್ನು ಮುಚ್ಚಿಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಅವರನ್ನು ಸೇವೆಯಿಂದ ವಜಾ ಮಾಡಿರುವ ನಿರ್ಧಾರ ಸರಿ ಇದೆ' ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿತ್ತು.
ತೀರ್ಪನ್ನು ಪ್ರಶ್ನಿಸಿ ಪವಾರ್ ಸುಭಾಷ್ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಅರವಿಂದ ಕುಮಾರ್ ಮತ್ತು ಶ್ರೀ ಚಂದ್ರಶೇಖರ್ ಅವರಿದ್ದ ಪೀಠವು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿತು. 'ಮೇಲ್ನೋಟಕ್ಕೆ ಈ ತೀರ್ಪು ದೋಷಪೂರಿತ. ಅಗತ್ಯಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ ಎಂಬುದು ಅನರ್ಹತೆಗೆ ಕಾರಣವಾಗಲಾರದು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ ಹೈಕೋರ್ಟ್ ತೀರ್ಪನ್ನು ಪರಿಶೀಲನೆಗೆ ಒಳಪಡಿಸಲಾಗುವುದು' ಎಂದು ಪೀಠವು ತಿಳಿಸಿದೆ.

