ನವದೆಹಲಿ: ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ.
ಕಳೆದ 12 ವರ್ಷಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ ಮತ್ತು ಮಿಲಿಂದ್ ದಿಯೋರಾ ಮುಂತಾದ ಯುವನಾಯಕರು ಪಕ್ಷವನ್ನು ತೊರೆದಿದ್ದು, ಅವರು ಮತ್ತೆ ಕಾಂಗ್ರೆಸ್ಗೆ ಮರಳಲು ಬಯಸಿದರೆ ಪಕ್ಷದೊಳಗೆ ಸೇರಿಸಿಕೊಳ್ಳುತ್ತಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಪಕ್ಷಬಿಟ್ಟು ಹೋದವರನ್ನು ಮರಳಿ ಸೇರಿಸಿಕೊಳ್ಳುವುದು ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬಿಟ್ಟವರು ಎಲ್ಲರೂ, ಪಕ್ಷದಲ್ಲಿದ್ದಾಗ ಅಧಿಕಾರವನ್ನು ಅನುಭವಿಸಿದ್ದಾರೆ. ಇಲ್ಲಿದ್ದಾಗ ಲಾಭ ಪಡೆದುಕೊಂಡು, ಬಿಜೆಪಿ ಸೇರಿದ್ದಾರೆ. ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದು ನಾಚಿಕೆಯ ಸಂಗತಿ. ಆದರೆ, ಭಾರತೀಯ ರಾಜಕಾರಣದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ಹೇಳಿದ್ದಾರೆ.
ಕಳೆದ 12 ವರ್ಷಗಳಿಂದ ನಾವು ಅಧಿಕಾರದಲ್ಲಿರದಿದ್ದರೂ, ಇಂದಿಗೂ ಕಾಂಗ್ರೆಸ್ನೊಳಗೆ ಇರುವವರು ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರುವವರು ಮಾತ್ರ ಎಂದು ಹೇಳಿದ್ದಾರೆ.

