ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಸಹಾಯಕ ಸುಮಿತ್ ರಾಯ್ನನ್ನು ಪತ್ತೆ ಹಚ್ಚಲು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ನಸುಕಿನ ವೇಳೆ ಕಾಳಿಘಾಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಕೇಂದ್ರ ಪಡೆಗಳೊಂದಿಗೆ ಧಾವಿಸಿದ ಪೊಲೀಸ್ ಸಿಬ್ಬಂದಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅವರ ನಿವಾಸದಲ್ಲಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಮೇದಿನಿಪುರದ ಸಾಲ್ಬೋನಿ ಪೊಲೀಸ್ ಠಾಣೆಯ ಪೊಲೀಸರ ತಂಡವು, ಕೋಲ್ಕತ ಪೊಲೀಸರು ಮತ್ತು ಕೇಂದ್ರ ಪಡೆಗಳ ನೆರವಿನೊಂದಿಗೆ ಶನಿವಾರ ಮುಂಜಾನೆ 3 ಗಂಟೆಗೆ ಅಭಿಷೇಕ್ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸಕ್ಕೆ ಧಾವಿಸಿದ್ದಾರೆ.
ಪೊಲೀಸರು ಎಷ್ಟು ಬಾರಿ ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಮನೆಯ ಬೀಗ ಒಡೆದು ಒಳಗೆ ನುಗ್ಗಿ ತಪಾಸಣೆ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ದಾಳಿಯ ಬಳಿಕ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಅವರು ಬೀಗ ಮುರಿದು ಇಡೀ ಮನೆಯನ್ನು ಜಾಲಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಸಹಾಯಕ ಸುಮಿತ್ ರಾಯ್ ಎಂಬಾತನ ಹುಡುಕಾಟಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ್ಬೋನಿ ಪೊಲೀಸರು ಕಳೆದ ಕೆಲವು ದಿನಗಳಿಂದ ಸುಮಿತ್ ರಾಯ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತನ ಮೊಬೈಲ್ ಫೋನ್ ಲೊಕೇಶನ್ ಕೊನೆಯದಾಗಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದಲ್ಲೇ ತೋರಿಸಿದ್ದರಿಂದ ಪೊಲೀಸರು ಮುಂಜಾನೆ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ, ಸುದೀರ್ಘ ಹುಡುಕಾಟದ ಬಳಿಕವೂ ಸುಮಿತ್ ರಾಯ್ ಪತ್ತೆಯಾಗಿಲ್ಲ.
ಸ್ಥಳಕ್ಕೆ ಧಾವಿಸಿದ ಮಮತಾ:
ತಮ್ಮ ಸೋದರಳಿಯನ ನಿವಾಸದ ಮೇಲೆ ದಾಳಿಯಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಕ್ಷಣ ಕಾಳಿಘಾಟ್ ನಿವಾಸಕ್ಕೆ ಧಾವಿಸಿದರು. ತಪಾಸಣೆ ನಡೆಯುತ್ತಿದ್ದ ವೇಳೆ ಅವರು ಮನೆಯಲ್ಲೇ ಇದ್ದರು.
ಬಿಜೆಪಿ-ಟಿಎಂಸಿ ಜಟಾಪಟಿ:
ಇದು ಬಿಜೆಪಿಯ ರಾಜಕೀಯ 'ದ್ವೇಷದ ಪರಮಾವಧಿ' ಎಂದು ಟಿಎಂಸಿ ನಾಯಕರು ಕಿಡಿಕಾರಿದ್ದಾರೆ. ನಸುಕಿನ ವೇಳೆ ಒಬ್ಬ ಜನಪ್ರತಿನಿಧಿಯ ಮನೆಗೆ ನುಗ್ಗಿರುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ.
ಬಿಜೆಪಿ ಸಮರ್ಥನೆ:
ಇತ್ತ ಬಿಜೆಪಿ ನಾಯಕರು ಟಿಎಂಸಿ ಆರೋಪವನ್ನು ತಳ್ಳಿಹಾಕಿದ್ದು, ತನಿಖಾಧಿಕಾರಿಗಳು ಕೇವಲ ಕಾನೂನು ಪ್ರಕ್ರಿಯೆಯನ್ನು ಪಾಲಿಸುತ್ತಿದ್ದಾರೆ. ವಂಚನೆ ಪ್ರಕರಣದ ಆರೋಪಿಯನ್ನು ಹಿಡಿಯಲು ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದಿದ್ದಾರೆ.

