ನವದೆಹಲಿ: 'ನೀವು ಎಡಪಂಥೀಯ ನಾಯಕರನ್ನು ತಬ್ಬಿಕೊಳ್ಳಬೇಡಿ, ಆದರೆ ವಿರೋಧ ಪಕ್ಷಗಳ ನಾಯಕರನ್ನು ಗುರಿ ಮಾಡಿಕೊಂಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಮೋದಿ ಸರ್ಕಾರಕ್ಕೆ ಸಹಾಯಕರಾಗುವುದನ್ನು ನಿಲ್ಲಿಸಿ' ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.
ಇತ್ತೀಚೆಗೆ (ಜೂ. 8) ನಡೆದಿದ್ದ 'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿ ರಾಹುಲ್ ಗಾಂಧಿ ಅವರು, 'ಕೇರಳಂನಲ್ಲಿ ನಾವು ಪಿಣರಾಯಿ ವಿಜಯನ್ ಅವರನ್ನು ಕಟುವಾಗಿ ಟೀಕಿಸಿದ್ದೆವು. ನೀವು ಹೋಗಿ ಅವರನ್ನು ಆಲಂಗಿಸಿಕೊಳ್ಳಿ ಎಂದರೆ ಅದು ಆಗದು. ನಾವು ಅವರ ಜೊತೆ ರಾಜಕೀಯವಾಗಿ ಹೋರಾಟ ನಡೆಸುತ್ತಿದ್ದೇವೆ' ಎಂದು ಹೇಳಿದ್ದರು.
ಸಭೆಯಲ್ಲಿ ರಾಹುಲ್ ಮಾಡಿದ್ದ ಭಾಷಣದ ಆಡಿಯೊವನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ಸಿಪಿಎಂ ನಾಯಕರು ವಾಗ್ದಾಳಿ ನಡೆಸಿದ್ದಾರೆ.
'ಪಿಣರಾಯಿ ಅವರನ್ನು ತಬ್ಬಿಕೊಳ್ಳುವಂತೆ ರಾಹುಲ್ ಅವರನ್ನು ಯಾರೂ ಕೇಳುತ್ತಿಲ್ಲ. ಆದರೆ ಪಿಣರಾಯಿ ಮತ್ತು ವಿಪಕ್ಷಗಳ ನಾಯಕರನ್ನು ಬಂಧಿಸುವಂತೆ ಒತ್ತಾಯಿಸುವ ಮೂಲಕ ನೀವು ಇ.ಡಿ ಮತ್ತು ಮೋದಿ ಸರ್ಕಾರಕ್ಕೆ ಸಹಾಯಕರಾಗುವುದನ್ನು ನಿಲ್ಲಿಸಿ ಎಂದು ಕೇಳುತ್ತಿದ್ದೇವೆ. ಅದು ವಿಪಕ್ಷದ ನಾಯಕನ ಕೆಲಸವಲ್ಲ ಎಂಬುದನ್ನು ಮನದಟ್ಟು ಮಾಡುತ್ತಿದ್ದೇವೆ' ಎಂದು ಅವರು 'ಎಕ್ಸ್'ನಲ್ಲಿ ಹೇಳಿದ್ದಾರೆ.
ಪಿಣರಾಯಿ ತಿರುಗೇಟು: ರಾಹುಲ್ ಹೇಳಿಕೆಗೆ ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದು, 'ನಾವು ಭೇಟಿಯಾದಾಗೆಲ್ಲ ಕೈಕುಲುಕುತ್ತೇವೆ, ಎಂದಿಗೂ ಆಲಿಂಗಿಸಿಲ್ಲ. ಆದರೆ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡಿರುವ ಫೋಟೊವನ್ನು ನಾನು ಇಂದು ನೋಡಿದೆ. ಅದರಿಂದ ನಮಗೇನೂನು ಸಮಸ್ಯೆಯಿಲ್ಲ. ಆದರೆ ರಾಹುಲ್ ಅವರು 'ಇಂಡಿಯಾ' ಮೈತ್ರಿ ಬಣವನ್ನು ಹೇಗೆ ನೋಡುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಅವರ ಇಂತಹ ವರ್ತನೆಯಿಂದಲೇ ಡಿಎಂಕೆ ಮೈತ್ರಿ ಬಣದಿಂದ ದೂರವಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

