ನವದೆಹಲಿ: 'ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದೇ ತೀರಬೇಕು ಎಂದು ಬಿಜೆಪಿ ಹವಣಿಸುತ್ತಿದೆ. ಈ ಹವಣಿಕೆಯ ಹಿಂದಿನ ಉದ್ದೇಶ ಮಹಿಳೆಯರಿಗೆ ಮೀಸಲಾತಿ ನೀಡುವುದಾಗಲೀ, ಕ್ಷೇತ್ರ ಪುನರ್ವಿಂಗಡಣೆಯಾಗಲೀ ಅಲ್ಲ. ಅದರ ಮುಖ್ಯ ಗುರಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಅಂತ್ಯ ಮಾಡುವುದಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
'ಪಿಟಿಐ' ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಜೈರಾಮ್ ರಮೇಶ್ ಮಾತನಾಡಿದರು.
'ಲೋಕಸಭೆಯಲ್ಲಿ ಏಪ್ರಿಲ್ 17ರಂದು (ಕ್ಷೇತ್ರಮರುವಿಂಗಡಣೆ ಮಸೂದೆಗಳಿಗೆ ಸೋಲಾದ ದಿನ) ಸ್ವಯಂ ಘೋಷಿತ ಚಾಣಕ್ಯನಿಗೆ (ಅಮಿತ್ ಶಾ) ಅವಮಾನವಾಯಿತು. ಈ ಮಸೂದೆಗಳನ್ನು ಗೆಲ್ಲಿಸಿಕೊಡುವುದಾಗಿ ಅವರು ಪ್ರಧಾನಿಗೆ ಮಾತು ಕೊಟ್ಟಿದ್ದರು. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ಶಾ ಅವರು ಪಕ್ಷಗಳನ್ನು ಒಡೆಯುತ್ತಿದ್ದಾರೆ' ಎಂದರು.
'ಟಿಎಂಸಿ ಒಡೆದರು. ಶಿವಸೇನೆಯನ್ನು (ಉದ್ಧವ್ ಬಣ) ಒಡೆಯುತ್ತಿದ್ದಾರೆ. ನಾವು 2024ರ ಲೋಕಸಭೆ ಚುನಾವಣೆಯಲ್ಲಿ ಏನು ಪ್ರಚಾರ ಮಾಡಿದ್ದೆವೋ ಅದು ಈಗ ಸತ್ಯವಾಗುತ್ತಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಅಂತ್ಯಗೊಳಿಸಲು ಅವರಿಗೆ '400 ಪಾರ್' ಬೇಕಿತ್ತು' ಎಂದರು.
800 ಸಂಸದರು ಯಾಕೆ ಬೇಕು?
ಎಲ್ಲ ರಾಜ್ಯದಲ್ಲಿಯೂ ಶೇ 50ರಷ್ಟು ಲೋಕಸಭೆ ಸ್ಥಾನಗಳನ್ನು ಹೆಚ್ಚಿಸಿದರೆ ವಿರೋಧ ಪಕ್ಷಗಳು ಕ್ಷೇತ್ರ ಪುನರ್ ವಿಂಗಡಣೆಯನ್ನು ಒಪ್ಪಿಕೊಳ್ಳುತ್ತೀರೇ? ಎಂಬ ಪ್ರಶ್ನೆಗೆ ಉತ್ತರಿಸಿ 'ವಿಷಯ ಇರುವುದು ನೀವು ಹೇಗೆ ಕ್ಷೇತ್ರ ಪುನರ್ವಿಂಗಡಣೆ ಮಾಡುತ್ತೀರಿ ಎಂಬ ಬಗ್ಗೆ' ಎಂದರು. ಮಾತು ಮುಂದುವರಿಸಿ 'ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ 'ಜುಗಲ್ಬಂದಿ'ಯನ್ನು ನೋಡಿಯಾಗಿದೆ. ಅಮಿತ್ ಶಾ ಅವರು ಹೇಳಿದಂತೆ ಆಯೋಗವು ಕೇಳುತ್ತಿದೆ. ಉತ್ತರ ಪ್ರದೇಶ ಪಶ್ಚಿಮ ಬಂಗಾಳ ಮತ್ತು ಬಿಹಾರದ ವಿಚಾರಗಳಲ್ಲಿ ಆಯೋಗದ ಮೇಲೆ ದೊಡ್ಡ ಕಪ್ಪು ಚುಕ್ಕೆ ಇದೆ. ಇಂಥ ಆಯೋಗ ನಡೆಸುವ ಕ್ಷೇತ್ರ ಪುನರ್ವಿಂಗಡಣೆ ಒಪ್ಪಿಕೊಳ್ಳಲು ಸಾಧ್ಯವೇ?' ಎಂದರು.
'ಸಂಸದರ ಸಂಖ್ಯೆ 800 ಆಗುವುದಕ್ಕೂ ಕಾಂಗ್ರೆಸ್ನ ವಿರೋಧವಿದೆ. ಈಗಲೇ 500ಕ್ಕೂ ಹೆಚ್ಚು ಸಂಸದರಿದ್ದಾರೆ. ಇವರಿಗೆ ಮಾತನಾಡಲು ಅವಕಾಶ ಸಿಗುವುದಿಲ್ಲ. ರಾಜ್ಯಸಭೆಗೆ ಏನಾಗುತ್ತದೆ? ಬಹಳ ಪ್ರಶ್ನೆಗಳಿವೆ. ಆದರೆ ಸರ್ಕಾರ ಮೌನವಾಗಿದೆ' ಎಂದರು.

