ನವದೆಹಲಿ: ವಿವಾಹಪೂರ್ವ ಲೈಂಗಿಕ (pre-marital relationships) ಸಂಪರ್ಕವು ವ್ಯಕ್ತಿಯ ವ್ಯಕ್ತಿತ್ವ ನಿರ್ಣಯಿಸಲು ಆಧಾರವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಮಾರು ಹತ್ತು ವರ್ಷಗಳ ಮೊದಲು ವಿವಾಹಪೂರ್ವ ಸಂಬಂಧ ಹೊಂದಿದ್ದರು ಎನ್ನುವ ಕಾರಣಕ್ಕೆ ನೇಮಕಾತಿ ರದ್ದುಗೊಳಿಸಿದ ತೆಲಂಗಾಣದ ಪೊಲೀಸ್ ಕಾನ್ಸ್ಟೆಬಲ್ ಗಜುಲಾ ತಿರುಪತಿ ಅವರ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಒಪ್ಪಿಗೆಯಿಂದ ನಡೆದಿರುವ ವಿವಾಹಪೂರ್ವ ಸಂಬಂಧ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ.
ಕಾಲ ಬದಲಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಸಂಬಂಧ ಮುರಿದಿದೆ ಎಂದರೆ ಅಲ್ಲಿ ವಂಚನೆಯಾಗಿದೆ ಎಂದರ್ಥವಲ್ಲ ಎಂದು ಹೇಳಿದೆ.
ಸಮಾಜದ ದೃಷ್ಟಿಯಲ್ಲಿ ವಿವಾಹಪೂರ್ವ ಸಂಬಂಧ ಕಳಂಕವೆಂದೇ ಪರಿಗಣಿಸಲ್ಪಟ್ಟಿದೆ. ಅವಿವಾಹಿತರು ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದಿದ್ದು, ಅಂತಿಮವಾಗಿ ಸಂಬಂಧ ಮುರಿದು ಹೋದರೆ ಇದರಲ್ಲಿ ತಪ್ಪಾಗಿದೆ, ವಂಚನೆಯಾಗಿದೆ ಎಂದು ಭಾವಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮದುವೆಯಾಗದ ಇಬ್ಬರ ನಡುವೆ ಒಪ್ಪಂದದ ದೈಹಿಕ ಸಂಬಂಧವು ವ್ಯಕ್ತಿಯ ವೃತ್ತಿಯ ಮೇಲೆ ಪರಿಣಾಮ ಬೀರಲು ಕಾರಣವಾಗಬಾರದು. ಮದುವೆಯಾಗದೆ ಇಬ್ಬರು ಒಪ್ಪಿಗೆಯಿಂದ ಆಯ್ಕೆಯ ಸಂಬಂಧವನ್ನು ಹೊಂದುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ತೆಲಂಗಾಣದ ಪೊಲೀಸ್ ಕಾನ್ಸ್ಟೆಬಲ್ ಗಜುಲಾ ತಿರುಪತಿ ಅವರ ಪ್ರಕರಣದಲ್ಲಿ ನ್ಯಾಯಾಲಯವು ಒಬ್ಬ ಅಭ್ಯರ್ಥಿಯು ಸರ್ಕಾರಿ ಕೆಲಸಕ್ಕೆ ಅರ್ಹನೇ ಎಂದು ನಿರ್ಧರಿಸುವುದಕ್ಕಿಂತ ಹೆಚ್ಚಾಗಿ ಸಮಾಜ ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿರುವ ಕಾನೂನಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ಮದುವೆಯಲ್ಲಿ ಕೊನೆಗೊಳ್ಳದ ಒಮ್ಮತದ ಸಂಬಂಧಗಳಿಗೆ ವಯಸ್ಕರಿಗೆ ಶಿಕ್ಷೆಯಾಗಬೇಕೇ? ಖಂಡಿತವಾಗಿಯೂ ಇಲ್ಲ ಎಂದು ಹೇಳಿದೆ.
ಕಾಲ ಬದಲಾಗಿದೆ, ಜನರ ನಡವಳಿಕೆಯನ್ನು ನಿರ್ಣಯಿಸುವಾಗ ಅಧಿಕಾರಿಗಳು ಆ ಬದಲಾವಣೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ವಿವಾಹಪೂರ್ವ ಸಂಬಂಧಗಳು ಈಗಿನ ವಾಸ್ತವವಾಗಿದೆ. ಇಬ್ಬರು ವಯಸ್ಕರು ದೀರ್ಘ ಕಾಲದವರೆಗೆ ಸಂಬಂಧದಲ್ಲಿ ಉಳಿದಿದ್ದರೆ ಆಗ ಸಂಬಂಧವು ಮಾನ್ಯ ಒಪ್ಪಿಗೆಯ ಆಧಾರದ ಮೇಲೆ ಇತ್ತು ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದರು.
ದೀರ್ಘಕಾಲದ ಸಂಬಂಧದಲ್ಲಿ ಮದುವೆಯ ಬಗ್ಗೆ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ನಡೆಸಿದರೂ ಇದು ಇಬ್ಬರ ಒಪ್ಪಿಗೆಯ ಆಧಾರದಲ್ಲೇ ನಡೆದಿರುತ್ತದೆ ಎನ್ನುವ ಊಹೆ ಇರುತ್ತದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ದಾವೆಗಳನ್ನು ನ್ಯಾಯಾಲಯ ಪದೇ ಪದೇ ರದ್ದುಗೊಳಿಸಿದೆ ಎಂದು ಎಂದು ಪೀಠ ಹೇಳಿದೆ.
ಏನು ಪ್ರಕರಣ ?
ಗಜುಲಾ ತಿರುಪತಿ ಅವರನ್ನು ತಾತ್ಕಾಲಿಕವಾಗಿ ಸ್ಟೈಪೆಂಡಿಯರಿ ಕೆಡೆಟ್ ಟ್ರೈನಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ೨014 ರಲ್ಲಿ ಈ ಅರ್ಜಿ ಸಲ್ಲಿಸುವಾಗ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ನೆರೆಹೊರೆಯ ಯುವತಿಯೊಂದಿಗೆ ಅವರು ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿತ್ತು. ಎರಡೂ ಕಡೆಯವರು ರಾಜಿ ಮಾಡಿಕೊಂಡ ಅನಂತರ 2015 ರಲ್ಲಿ ಲೋಕ ಅದಾಲತ್ ನಲ್ಲಿ ಇದನ್ನು ಇತ್ಯರ್ಥಪಡಿಸಲಾಗಿತ್ತು. ಆದರೆ ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯು ಇದು ಅನೈತಿಕ ಎಂದು ಹೇಳಿ ಅವರ ಆಯ್ಕೆಯನ್ನು ರದ್ದುಗೊಳಿಸಿತು. ಹೀಗಾಗಿ ತಿರುಪತಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

