ನವದೆಹಲಿ: ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳನ್ನು ರೈತರಿಂದಲೇ ನೇರವಾಗಿ ಖರೀದಿ ಮಾಡಬೇಕು, ಮಧ್ಯವರ್ತಿಗಳ ಪಾತ್ರವನ್ನು ಹೋಗಲಾಡಿಸಬೇಕು ಎಂದು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ (ಎನ್ಸಿಸಿಎಫ್) ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.
ನಾಫೆಡ್ನ ಕೆಲವು ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯು ಈಚಿನ ವರ್ಷಗಳಲ್ಲಿ ಜಾಸ್ತಿ ಆಗಿದೆ. ಆದರೆ ಕನಿಷ್ಠ ಬೆಂಬಲ ಬೆಲೆಯು ಬೆಳೆಗಾರರನ್ನು ತಲುಪದೆ ಇದ್ದ ಕಾರಣಕ್ಕೆ ಇವುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ.
'ಮಧ್ಯಮವರ್ತಿಗಳ ಪಾತ್ರವನ್ನು ತೊಡೆಯುವ ಅಗತ್ಯವಿದೆ. ಪ್ರಯೋಜನಗಳು ರೈತರಿಗೆ ತಲುಪುವಂತೆ ಮಾಡಲು ನಾಫೆಡ್ ಮತ್ತು ಎನ್ಸಿಸಿಎಫ್ ರೈತರಿಂದಲೇ ಧಾನ್ಯ ಹಾಗೂ ಎಣ್ಣೆಕಾಳು ಖರೀದಿಸುವುದನ್ನು ಆರಂಭಿಸಲು ಇದು ಸರಿಯಾದ ಸಂದರ್ಭ' ಎಂದು ಶಾ ಅವರು ಹೇಳಿದ್ದಾರೆ.
ಈ ಕೆಲಸಕ್ಕೆ ಶಾ ಅವರು ಎರಡು ವರ್ಷಗಳ ಕಾಲಮಿತಿ ನಿಗದಿ ಮಾಡಿದ್ದಾರೆ. ಮಧ್ಯವರ್ತಿಗಳ ಪಾತ್ರ ಇಲ್ಲದೆ ಈ ಎರಡು ಸಹಕಾರ ಸಂಸ್ಥೆಗಳಿಗೆ ಮಾರಾಟ ಮಾಡಲು ರೈತರಿಗೆ ಸಾಧ್ಯವಾಗಲಿದೆ ಎಂದಿದ್ದಾರೆ.
ಕೊರತೆಯನ್ನು ನೀಗಿಸಿಕೊಳ್ಳಲು ದೇಶವು ಈಗ ವರ್ಷಕ್ಕೆ 70 ಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಹಾಗೂ 1.6 ಕೋಟಿ ಟನ್ ಎಣ್ಣೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ನಾಫೆಡ್ ಸಂಸ್ಥೆಯು 2013ರಲ್ಲಿ ತೀವ್ರ ಸ್ವರೂಪದ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿತ್ತು. ಆಗ ಅಸ್ತಿತ್ವ ಉಳಿಸಿಕೊಳ್ಳಲು ಅದಕ್ಕೆ ಸರ್ಕಾರದ ಮಧ್ಯಪ್ರವೇಶ ಅಗತ್ಯವಾಗಿತ್ತು ಎಂದು ಶಾ ಅವರು ನೆನಪಿಸಿಕೊಂಡರು. ಆದರೆ ಆ ನಂತರದಲ್ಲಿ ಸಂಸ್ಥೆಯ ವಾರ್ಷಿಕ ವಹಿವಾಟು ₹500 ಕೋಟಿಯಿಂದ ₹30 ಸಾವಿರ ಕೋಟಿಗೆ (2024-25ರಲ್ಲಿ) ಹೆಚ್ಚಾಗಿದೆ, ಸಂಸ್ಥೆಯು 76 ಲಕ್ಷ ರೈತರನ್ನು ತಲುಪಿದೆ ಎಂದಿದ್ದಾರೆ.
ನಾಫೆಡ್ ಸಂಸ್ಥೆಯು ವಾರ್ಷಿಕ ₹50 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಬೇಕು ಎಂದು ಅವರು ಸೂಚಿಸಿದ್ದಾರೆ.
ಮಂಗಳವಾರ ಉದ್ಘಾಟನೆ ಆಗಿರುವ ನಾಫೆಕ್ಸ್.ಇನ್ (nafex.in) ವೇದಿಕೆಯು ಖರೀದಿಸಿದ ಧಾನ್ಯಗಳು ಹಾಗೂ ಎಣ್ಣೆಕಾಳುಗಳ ಪಾರದರ್ಶಕ ಹರಾಜು ಪ್ರಕ್ರಿಯೆ ಸಾಧ್ಯವಾಗಿಸಲಿದೆ. ಇದಕ್ಕೂ ಮೊದಲು ನಾಫೆಡ್ ಸಂಸ್ಥೆಯು ಹರಾಜು ಪ್ರಕ್ರಿಯೆಗೆ ಖಾಸಗಿ ವೇದಿಕೆಗಳನ್ನು ಆಶ್ರಯಿಸಿತ್ತು.

