ನವದೆಹಲಿ: ವೆನೆಜುವೆಲಾದಲ್ಲಿ ಪ್ರಬಲ ಭೂಕಂಪ ಸಂಭವಿಸುವ ಕೆಲವೇ ಸೆಕೆಂಡುಗಳ ಮುನ್ನ ಅಲ್ಲಿನ ಕೋಟ್ಯಂತರ ಜನರ ಆಂಡ್ರಾಯ್ಡ್ ಮೊಬೈಲ್ಗಳಿಗೆ ಗೂಗಲ್ನಿಂದ ಎಚ್ಚರಿಕೆ ಸಂದೇಶವೊಂದು ಹೋಗಿತ್ತು. ಭೂಮಿ ನಡುಗುವ ಮುನ್ನವೇ ಸಿಕ್ಕ ಈ ಕೆಲವೇ ಸೆಕೆಂಡುಗಳ ಅಮೂಲ್ಯ ಸಮಯ, ಇಡೀ ವಿಶ್ವದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.
ಅದೇನೆಂದರೆ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತಂತ್ರಜ್ಞಾನವು ಮನುಷ್ಯನ ಪ್ರಾಣ ಉಳಿಸಬಲ್ಲದೇ? ಇದಕ್ಕೆ ತಜ್ಞರ ಉತ್ತರ ಹೌದು. ಗೂಗಲ್ ಭವಿಷ್ಯ ನುಡಿದು ಈ ಭೂಕಂಪವನ್ನು ಮೊದಲೇ ಊಹಿಸಿರಲಿಲ್ಲ. ಬದಲಿಗೆ, ಭೂಕಂಪದ ಆರಂಭಿಕ ಕಂಪನಗಳನ್ನು ಅತ್ಯಂತ ವೇಗವಾಗಿ ಪತ್ತೆಹಚ್ಚಿ, ನಡುಕ ಇಡೀ ಪ್ರದೇಶವನ್ನು ಆವರಿಸುವ ಮುನ್ನವೇ ಜನರನ್ನು ಎಚ್ಚರಿಸಿತ್ತು.
ಗೂಗಲ್ನ 'ಆಂಡ್ರಾಯ್ಡ್ ಅರ್ಥ್ಕ್ವೇಕ್ ಅಲರ್ಟ್ ಸಿಸ್ಟಮ್' ಈ ತಂತ್ರಜ್ಞಾನದ ಹಿಂದೆ ಕೆಲಸ ಮಾಡಿದೆ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿರುವ ಮೋಷನ್ ಸೆನ್ಸರ್ಗಳು ಭೂಮಿಯ ಅತ್ಯಂತ ಸಣ್ಣ ಚಲನೆಯನ್ನೂ ಗ್ರಹಿಸಬಲ್ಲವು. ಈ ಫೋನ್ಗಳ ಜಾಲವನ್ನೇ ಗೂಗಲ್ ಇಲ್ಲಿ ಬಳಸಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಒಟಿಎಸ್.ಐ ಸಂಸ್ಥೆಯ ನಿರ್ದೇಶಕ ನಿಖರ್ ಅರೋರಾ, 'ವೆನೆಜುವೆಲಾ ಘಟನೆಯು ಜಾಗತಿಕವಾಗಿ ಭೂಕಂಪ ಮುನ್ನೆಚ್ಚರಿಕೆ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂಬುದನ್ನು ತೋರಿಸುತ್ತದೆ. ಗೂಗಲ್ ಭೂಕಂಪವನ್ನು ಮೊದಲೇ ಊಹಿಸುವುದಿಲ್ಲ. ಬದಲಿಗೆ ಭೂಕಂಪ ಆರಂಭವಾದ ತಕ್ಷಣ ಅದರ ತೀವ್ರತೆ ಹೆಚ್ಚಾಗುವ ಮುನ್ನವೇ ಎಚ್ಚರಿಕೆಯ ಸಂದೇಶ ಕಳುಹಿಸುತ್ತದೆ' ಎಂದು ವಿವರಿಸಿದ್ದಾರೆ.
'ಒಂದೇ ಪ್ರದೇಶದ ನೂರಾರು ಫೋನ್ಗಳಲ್ಲಿ ಈ ತರಂಗಗಳ ಮಾದರಿ ಪತ್ತೆಯಾದ ತಕ್ಷಣ, ಗೂಗಲ್ನ ಅಲ್ಗಾರಿದಮ್ಗಳು ಭೂಕಂಪದ ಕೇಂದ್ರಬಿಂದು ಮತ್ತು ಅದರ ತೀವ್ರತೆಯನ್ನು ಲೆಕ್ಕಹಾಕಿ ಆ ಭಾಗದ ಜನರಿಗೆ ತಕ್ಷಣ ಸಂದೇಶ ಕಳುಹಿಸುತ್ತವೆ' ಎಂದು ಅರೋರಾ ತಿಳಿಸಿದ್ದಾರೆ.
'ಹವಾಮಾನ ವೈಪರೀತ್ಯದ ಜೊತೆಗೆ ಭೂಕಂಪ, ಪ್ರವಾಹ, ಚಂಡಮಾರುತ ಮತ್ತು ಅತಿಯಾದ ಬಿಸಿಗಾಳಿಯಂತಹ ಎಲ್ಲಾ ನೈಸರ್ಗಿಕ ವಿಕೋಪಗಳಿಗೂ ಇಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು' ಎಂದು ಅವರು ಒತ್ತಿ ಹೇಳಿದ್ದಾರೆ.
'ಈ ಮುನ್ನೆಚ್ಚರಿಕೆ ಕೇವಲ ಕೆಲವೇ ಸೆಕೆಂಡುಗಳದ್ದಾಗಿರಬಹುದು, ಆದರೆ ಜನರು ಅಪಾಯಕಾರಿ ಕಟ್ಟಡಗಳಿಂದ ದೂರ ಓಡಲು ಅಥವಾ ಸುರಕ್ಷಿತ ಸ್ಥಳ ತಲುಪಲು ಈ ಸಮಯ ಅತ್ಯಂತ ನಿರ್ಣಾಯಕವಾಗಿರುತ್ತದೆ' ಎಂದಿದ್ದಾರೆ.

