ದೋಹಾ: ಕತಾರ್ನ ಕೈಗಾರಿಕಾ ನಗರ ರಾಸ್ ಲಫನ್ನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ 12 ಭಾರತೀಯರ ಪೈಕಿ, ನಾಲ್ವರ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಸಂಭವಿಸಿದ ಸ್ಫೋಟದಲ್ಲಿ 12 ಭಾರತೀಯರು ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದರು.
'ಉಳಿದವರ ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ಕಳುಹಿಸಲಾಗುವುದು. ಈ ನಿಟ್ಟಿನಲ್ಲಿ ಸಹಕರಿಸಿದ ಕತಾರ್ ಅಧಿಕಾರಿಗಳು ಮತ್ತು ಭಾರತೀಯ ಸಮುದಾಯದ ಸಂಘಟನೆಗಳಿಗೆ ಧನ್ಯವಾದ' ಎಂದು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
'ಅವಘಡದಲ್ಲಿ ಗಾಯಗೊಂಡ ಭಾರತೀಯರೊಂದಿಗೆ ರಾಯಭಾರ ಕಚೇರಿಯು ಸಂಪರ್ಕದಲ್ಲಿದೆ' ಎಂದು ಹೇಳಿದ್ದಾರೆ.
ಗಾಯಾಳುಗಳಲ್ಲಿ ಕತಾರ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ತಾಂಜಾನಿಯಾ, ನೈಜೀರಿಯಾ, ನೇಪಾಳ ಪ್ರಜೆಗಳು ಸೇರಿದ್ದಾರೆ.

