ಕಾಸರಗೋಡು: ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕಾಸರಗೋಡು ಭೂಗರ್ಭಜಲ ಇಲಾಖೆಗೆ ಹೊಸದಾಗಿ ವಿತರಿಸಲಾದ ಎರಡು ಕೊಳವೆಬಾವಿ ನಿರ್ಮಾಣ ಘಟಕದ ವಾಹನಗಳ ಹಸ್ತಾಂತರ ಸಮಾರಂಭ ಸಿವಿಲ್ ಸ್ಟೇಶನ್ ವಠಾರದಲ್ಲಿ ಜರುಗಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಹೊಸ ವಾಹನಗಳಿಗೆ ಧ್ವಜತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಹಾಗೂ ಆಯಕಟ್ಟಿನ ಪ್ರದೇಶಗಳನ್ನು ಸುಲಭವಾಗಿ ತಲುಪುವ ರೀಯಿಯಲ್ಲಿ ಈ ವಾಹನಗಳು ಸಹಕಾರಿಯಾಗಲಿದ್ದು, ಜಿಲ್ಲೆಯ ಕುಡಿಯುವ ನೀರಿನ ಕೊರತೆಯನ್ನು ಪರಿಹರಿಸಲು ಸಹ ಇದು ಸಹಾಯ ಮಾಡಲಿದೆ. ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವಲ್ಲಿ ಹೊಸ ಅತ್ಯಾಧುನಿಕ ವ್ಯವಸ್ಥೆಯು ಜನರಿಗೆ ಹೆಚ್ಚು ಸಹಾಯಕವಾಗಲಿರುವುದಾಗಿ ತಿಳಿಸಿದರು. ಕಾಸರಗೋಡು ಭೂಗರ್ಭಜಲ ಇಲಾಖೆಯ ಜಿಲ್ಲಾ ಅಧಿಕಾರಿ ರತೀಶ್.ಒ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಎಂಜಿನಿಯರ್ ಸುಮಿತ್ ಲಾಲ್ ಸಿ ಮತ್ತು ಹಿರಿಯ ಗುಮಾಸ್ತ ಮನೋಜ್ ಕುಮಾರ್ ಪಿ.ಆರ್. ಉಪಸ್ಥಿತರಿದ್ದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಯೀಮ್ ವಿ.ಎಂ. ಸ್ವಾಗತಿಸಿದರು. ಮಾಸ್ಟರ್ ಡ್ರಿಲ್ಲರ್ ಅಬ್ದುಲ್ ಸಮದ್ ಎ ವಂದಿಸಿದರು.



