ನವದೆಹಲಿ: ಭಾರತದಲ್ಲೇ ಮೊದಲ ಬಾರಿಗೆ ನಿರ್ಮಿಸಲಾದ 'ಏರ್ ಕುಶನ್ ವಾಹನ H-561' ಅನ್ನು ಜೂನ್ 18 ರಂದು (ಗುರುವಾರ) ಉದ್ಘಾಟನೆ ಮಾಡಲಾಯಿತು. ಶಿಪ್ಯಾರ್ಡ್ನ ರಸ್ಸೈಮ್ ಸೌಲಭ್ಯದಲ್ಲಿ ಭಾರತೀಯ ಕರಾವಳಿ ಪಡೆಯ ಹಿರಿಯ ಅಧಿಕಾರಿಗಳು ಮತ್ತು ಹಡಗು ನಿರ್ಮಾಣ ಉದ್ಯಮದ ಪ್ರತಿನಿಧಿಗಳ ಸಮ್ಮುಖದಲ್ಲಿ ಏರ್ ಕುಶನ್ಗೆ ಚಾಲನೆ ನೀಡಲಾಯಿತು.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿಗಳು, 'ಗೋವಾದ ಚೌಗುಲೆ & ಕಂಪನಿ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಏರ್ ಕುಶನ್ ಅನ್ನು ನಿರ್ಮಿಸಲಾಗಿದೆ. ಈ ವಾಹನವು ಭಾರತೀಯ ಕರಾವಳಿ ರಕ್ಷಣಾ ಪಡೆಯ ಕೆಲಸದ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ. ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಸಮುದ್ರದಲ್ಲಿ ಮಾಡುವ ಬೇರೆ ಬೇರೆ ತರಹದ ಕೆಲಸಗಳಿಗೆ ಇದು ನೆರವಾಗಲಿದೆ. ಇದರಿಂದ ಭಾರತದ ಸ್ವಾವಲಂಬನೆ ಕನಸಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಹಡಗುಗಳನ್ನು ತಯಾರಿಸುವಲ್ಲಿ ನಮ್ಮ ದೇಶದ ಕೈಗಾರಿಕೋದ್ಯಮ ಶಕ್ತಿಯುತವಾಗಿವೆ ಎಂಬುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ' ಎಂದಿದ್ದಾರೆ.
'ಈ ಯೋಜನೆಯು ನಮ್ಮ ದೇಶದ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುತ್ತದೆ. ಭಾರತದಲ್ಲೇ ಹಡಗುಗಳನ್ನು ತಯಾರಿಸುವ ಕೌಶಲ್ಯವನ್ನು ಇದು ಮತ್ತಷ್ಟು ಬಲಪಡಿಸುತ್ತದೆ. ಅಲ್ಲದೆ, ರಕ್ಷಣಾ ವಲಯದಲ್ಲಿ ಭಾರತವು ಸ್ವಾವಲಂಬಿಯಾಗಬೇಕೆಂಬ ಸರ್ಕಾರದ ಗುರಿಗೆ ಇದು ಸಾಕ್ಷಿಯಾಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
'ನಮ್ಮ ದೇಶದ ಅಗತ್ಯಗಳಿಗೆ ತಕ್ಕಂತೆ ಭಾರತದಲ್ಲೇ ಆಧುನಿಕ ಪರಿಹಾರಗಳನ್ನು ಕಂಡುಕೊಳ್ಳಲು ಐಸಿಜಿ , ರಕ್ಷಣಾ ಸಚಿವಾಲಯ ಭಾರತೀಯ ಕೈಗಾರಿಕೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಇಂತಹ ಪ್ರಯತ್ನಗಳು ಉತ್ಪಾದನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಏರ್ ಕುಶನ್ನಿಂದ ಭಾರತಕ್ಕೆ ಮತ್ತೊಂದು ಸಾಧನೆಯ ಗರಿ ಸಿಕ್ಕಿದೆ' ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

