ಕೋಲ್ಕತ್ತ: 20 ಬಂಡಾಯ TMC ಸಂಸದರು ತನ್ನೊಂದಿಗೆ ವಿಲೀನಗೊಂಡ ನಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ತಾನು ಪಶ್ಚಿಮ ಬಂಗಾಳದ ಅತಿ ದೊಡ್ಡ ಸಂಸದೀಯ ಬಣವಾಗಿ ಹೊರಹೊಮ್ಮಿರುವುದಾಗಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸಿದೆ.
ತ್ರಿಪುರಾ ಮೂಲದ ನೋಂದಾಯಿತ ಆದರೆ ಮಾನ್ಯತೆ ಪಡೆಯದ ಈ ರಾಜಕೀಯ ಪಕ್ಷವು ವಿಲೀನ ಪ್ರಕ್ರಿಯೆ ನಡೆದ ಕೇವಲ ಒಂದು ದಿನದೊಳಗೆ ಮುಂಚೂಣಿಗೆ ಬಂದಿದ್ದು, ಇದು ರಾಜ್ಯದ ಸಂಸದೀಯ ಚಿತ್ರಣವನ್ನು ಗಣನೀಯವಾಗಿ ಬದಲಾಯಿಸಿದೆ.
ಈ ಪಕ್ಷಕ್ಕೆ ಸಂಬಂಧಿಸಿದ ವಿಳಾಸವೊಂದು ಹೌರಾ ಜಿಲ್ಲೆಯ ಸಂಕ್ರೈಲ್ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಆಸ್ತಿಯು ಉತ್ತಿಯ ಕುಂಡು ಮತ್ತು ಅವರ ಪತ್ನಿ ಶಿವ್ಲಿ ಅವರಿಗೆ ಸೇರಿದ್ದಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಈ ದಂಪತಿ ಸುಮಾರು ಎಂಟು ವರ್ಷಗಳ ಹಿಂದೆ ನಾಡಿಯಾ ಜಿಲ್ಲೆಯಿಂದ ಇಲ್ಲಿಗೆ ವಲಸೆ ಬಂದಿದ್ದು, ಈ ಕಟ್ಟಡದಿಂದ ಎನ್ಜಿಒ ಒಂದನ್ನು ನಡೆಸುತ್ತಿದ್ದಾರೆ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ.
ಸೋಮವಾರ ಬೆಳಗ್ಗೆಯಿಂದಲೇ ಈ ಕಟ್ಟಡದ ಹೊರಗೆ ಕೇಂದ್ರ ಅರೆಸೇನಾ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿದೆ.
20 ಲೋಕಸಭಾ ಸ್ಥಾನಗಳೊಂದಿಗೆ NCPI ಪಶ್ಚಿಮ ಬಂಗಾಳದ ಅತಿ ದೊಡ್ಡ ಸಂಸದೀಯ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಧ್ವನಿಯನ್ನು ರೂಪಿಸುತ್ತದೆ ಎಂದು ಪಕ್ಷವು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿಕೊಂಡಿದೆ.
"ಸಂಖ್ಯೆಗಳೇ ಎಲ್ಲವನ್ನೂ ಹೇಳುತ್ತವೆ. ನಾಯಕತ್ವ, ಪ್ರಾತಿನಿಧ್ಯ ಮತ್ತು ಜನಾದೇಶ ಪಶ್ಚಿಮ ಬಂಗಾಳ ಹಾಗೂ ಭಾರತದ ಭವಿಷ್ಯವನ್ನು ನಿರ್ಧರಿಸುವುದನ್ನು ಮುಂದುವರಿಸುತ್ತವೆ" ಎಂದೂ ಪೋಸ್ಟ್ನಲ್ಲಿ ಹೇಳಲಾಗಿದೆ.
NCPI ಹೇಳಿಕೊಂಡಿರುವಂತೆ, ಅದು ಪಶ್ಚಿಮ ಬಂಗಾಳದ ಒಟ್ಟು 42 ಸಂಸದರ ಪೈಕಿ 20 ಸಂಸದರನ್ನು ಹೊಂದಿದೆ. ಬಿಜೆಪಿ 12, TMC ಎಂಟು ಮತ್ತು ಕಾಂಗ್ರೆಸ್ ಓರ್ವ ಸಂಸದರನ್ನು ಹೊಂದಿವೆ.
ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಎಲ್ಲ 20 ಬಂಡಾಯ TMC ಸಂಸದರನ್ನು ಪ್ರತ್ಯೇಕವಾಗಿ ಸ್ವಾಗತಿಸಿರುವ NCPI, ಅವರ ದೀರ್ಘಕಾಲದ ರಾಜಕೀಯ ಅನುಭವ, ತಳಮಟ್ಟದ ಸಂಪರ್ಕಗಳು ಮತ್ತು ಜನರಿಗೆ ಬದ್ಧತೆಯು ಪಕ್ಷವನ್ನು ಬಲಪಡಿಸುತ್ತದೆ ಎಂದು ಹೇಳಿದೆ.
NCPI 2023ರ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ, ಅವರೆಲ್ಲರೂ ಸೋತಿದ್ದರು.
NCPIನ ಸಂಸ್ಥಾಪಕ ಸದಸ್ಯ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಂತನು ಡೇ ಅವರು ಈ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
"ಇದು ನಮ್ಮ ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ದೇಶಕ್ಕಾಗಿ ಕೆಲಸ ಮಾಡಲು ನಮಗೆ ನೆರವಾಗಲಿದೆ. ನಾವು ಪ್ರಧಾನಿ ಮೋದಿಯವರನ್ನು ಬೆಂಬಲಿಸುತ್ತೇವೆ ಮತ್ತು ಎನ್ಡಿಎ ಪಾಲುದಾರರಾಗಿ ಕೆಲಸ ಮಾಡಲು ಬಯಸುತ್ತೇವೆ. ಕಾಕೋಲಿ ಘೋಷ್ ದಸ್ತಿದಾರ್ ಅವರು ಮಾತುಕತೆಗೆ ಆಹ್ವಾನಿಸಿದರೆ ನಾನು ಹೊಸದಿಲ್ಲಿಗೆ ಹೋಗುತ್ತೇನೆ. ನಂತರ ನಾವಿಬ್ಬರೂ ಒಟ್ಟಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಬಹುದು" ಎಂದು ಅವರು ಹೇಳಿದ್ದಾರೆ.

