ಕೋಲ್ಕತ್ತ : ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ಪುತ್ರ ಬೈದ್ಯನಾಥ್ ಘೋಷ್ ದಸ್ತಿದಾರ್ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ಪಕ್ಷದ ಹಲವು ನಾಯಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬರಾಸತ್ ಕ್ಷೇತ್ರದಿಂದ ಸ್ಪರ್ಧಿಸಲು ತಾವು ಪಕ್ಷದ ಟಿಕೆಟ್ ಕೋರಿರುವುದಾಗಿ ಹೇಳಿರುವುದಕ್ಕೆ ವಿರೋಧಿಸಿ ಅವರು ಈ ಕ್ರಮ ಕೈಗೊಂಡಿದ್ದಾರೆ.
ಮಮತಾ ಬ್ಯಾನರ್ಜಿ, ಮಹುವಾ ಮೊಯಿತ್ರಾ, ಕಲ್ಯಾಣ್ ಬ್ಯಾನರ್ಜಿ, ಸೌಗತಾ ರಾಯ್ ಹಾಗೂ ಸೋನಾಲಿ ಗುಹಾ ಅವರಿಗೆ ನೋಟಿಸ್ ರವಾನಿಸಲಾಗಿದೆ.
ರವಿವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮಹುವಾ ಮೊಯಿತ್ರಾ, ಕಾಕೋಲಿ ಘೋಷ್ ದಸ್ತಿದಾರ್ ಅವರು ತಮ್ಮ ಪುತ್ರ ಬೈದ್ಯನಾಥ್ ಘೋಷ್ ದಸ್ತಿದಾರ್ಗೆ ಬರಾಸತ್ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬೈದ್ಯನಾಥ್, ಈ ಆರೋಪಗಳನ್ನು 'ಶೇ.100ರಷ್ಟು ಸುಳ್ಳು' ಎಂದು ತಳ್ಳಿಹಾಕಿದ್ದಾರೆ.
'ರಾಜಕೀಯ ಭಿನ್ನಾಭಿಪ್ರಾಯಗಳನ್ನು ರಾಜಕೀಯವಾಗಿಯೇ ಹೋರಾಡಬೇಕು. ಖಾಸಗಿ ವ್ಯಕ್ತಿಗಳು ಮತ್ತು ಕುಟುಂಬ ಸದಸ್ಯರನ್ನು ವಿವಾದಕ್ಕೆ ಎಳೆಯಬಾರದು. ನನ್ನ ಕಾನೂನು ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದ್ದೇನೆ' ಎಂದು ಬೈದ್ಯನಾಥ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಟಿಎಂಸಿಯ ಆಂತರಿಕ ಬಿಕ್ಕಟ್ಟಿನ ನಡುವೆಯೇ ಈ ಕಾನೂನು ನೋಟಿಸ್ ನೀಡಲಾಗಿದೆ. ಸಂಸತ್ತಿನಲ್ಲಿ ಟಿಎಂಸಿ ಸಂಸದರ ಭಿನ್ನಮತೀಯ ಗುಂಪಿನ ಪ್ರಮುಖ ಮುಖವಾಗಿ ಕಾಕೋಲಿ ಘೋಷ್ ದಸ್ತಿದಾರ್ ಗುರುತಿಸಿಕೊಂಡಿದ್ದಾರೆ.
'ಡಾ. ಬೈದ್ಯನಾಥ್ ಘೋಷ್ ದಸ್ತಿದಾರ್ ಅವರ ಕುರಿತು ಮಾಡಲಾದ ಸುಳ್ಳು, ಮಾನಹಾನಿಕರ ಮತ್ತು ಅನಗತ್ಯ ಉಲ್ಲೇಖಗಳನ್ನು ತಕ್ಷಣ ನಿಲ್ಲಿಸಿ ಹಿಂಪಡೆಯಬೇಕು' ಎಂದು ನೋಟಿಸ್ನಲ್ಲಿ ಆಗ್ರಹಿಸಲಾಗಿದೆ.
ನೋಟಿಸ್ನಲ್ಲಿ ಬೈದ್ಯನಾಥ್ ಅವರನ್ನು ಬೋಸ್ಟನ್ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ, ಹಾರ್ವರ್ಡ್ ವಿಶ್ವವಿದ್ಯಾಲಯ ಹಾಗೂ ಲಂಡನ್ನ ಸೆಂಟ್ರಲ್ ಮತ್ತು ನಾರ್ತ್ ವೆಸ್ಟ್ ಲಂಡನ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ನಲ್ಲಿ ತರಬೇತಿ ಪಡೆದಿರುವ ಮನೋವೈದ್ಯ ಎಂದು ಉಲ್ಲೇಖಿಸಲಾಗಿದೆ. ಶೈಕ್ಷಣಿಕ ಹಾಗೂ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿರುವ ವ್ಯಕ್ತಿ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಆದರೆ, ನಾವು ಯಾವುದೇ ಟಿಕೆಟ್ ಕೋರಿಲ್ಲ ಎಂದು ಬೈದ್ಯನಾಥ್ ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಟಿಎಂಸಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ರಾಜಕೀಯ ಸಲಹಾ ಸಂಸ್ಥೆ ಐಪಿಎಸಿ (Ipmc) ಪ್ರತಿನಿಧಿಗಳೇ ತಮ್ಮನ್ನು ಸಂಪರ್ಕಿಸಿ ಬರಾಸತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯೋಚಿಸುವಂತೆ ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ.

