ಕೊಲ್ಕತ್ತಾ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಛಾಟಿತ ತೃಣಮೂಲ ಕಾಂಗ್ರೆಸ್ ಶಾಸಕ ರಿತಬ್ರಾತ ಬ್ಯಾನರ್ಜಿ ಅವರನ್ನು ಬೆಂಬಲಿಸಿ 60 ಶಾಸಕರು ಬೆಂಬಲ ಪತ್ರವನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಬಂಗಾಳ ವಿಧಾನಸಭೆ ಸ್ಪೀಕರ್ ಅವರು ರಿತಬ್ರಾತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನಾಗಿ ನೇಮಕಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿತಬ್ರಾತ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ನಮ್ಮ ನಾಯಕಿ ಮತ್ತು ಪಕ್ಷವನ್ನು ವಿಭಜಿಸುವ ಉದ್ದೇಶವಿಲ್ಲ ಎಂದು ಸಮರ್ಥಿಸಿಕೊಂಡರು.
ರಿತಬ್ರಾತ ಬ್ಯಾನರ್ಜಿ ಅವರಿಗೆ ವಿಪಕ್ಷ ನಾಯಕನ ಕೊಠಡಿಯ ಕೀಲಿ ಕೈಯನ್ನು ಹಸ್ತಾಂತರಿಸಲಾಗಿದೆ. "ನಾವು ಪ್ರಮುಖ ಪ್ರತಿಪಕ್ಷ. ನಾವು ಒಂದು ತಂಡವಾಗಿ ಹೋರಾಡಿದ್ದೇವೆ" ಎಂದು ರಿತಬ್ರತಾ ಅವರು ವಿಪಕ್ಷ ನಾಯಕನಾಗಿ ಗುರುತಿಸಲ್ಪಟ್ಟ ಬಳಿಕ ಮೊದಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಮಮತಾ ಬ್ಯಾನರ್ಜಿ ಅವರು ಇದುವರೆಗೆ ನೀಡಿದಂತೆ ಮುಂದೆಯೂ ನಮಗೆ ಮಾರ್ಗದರ್ಶನ ನೀಡಬೇಕು ಎಂದು ನಾವು ಮನವಿ ಮಾಡುತ್ತೇವೆ. ಪಕ್ಷದ ನೇತೃತ್ವದಲ್ಲಿಯೂ ಅವರು ಮುಂದುವರಿಯಲಿ ಎಂಬುದು ನಮ್ಮ ಆಶಯ" ಎಂದು ಹೇಳಿದ್ದಾರೆ.
ಇದೇ ವೇಳೆ, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ರಿತಬ್ರಾತ ಬ್ಯಾನರ್ಜಿ, "ಇದು ವ್ಯಕ್ತಿ ಪ್ರಾಬಲ್ಯದ ವಿರುದ್ಧದ ಸಾಮೂಹಿಕ ಹೋರಾಟವಾಗಿದೆ" ಎಂದು ಹೇಳಿದರು.
ಇದಕ್ಕೂ ಮೊದಲು 58 ಟಿಎಂಸಿ ಶಾಸಕರು ಸ್ಪೀಕರ್ ರತೀಂದ್ರನಾಥ್ ಬೋಸ್ ಅವರಿಗೆ ರಿತಬ್ರಾತ ಅವರನ್ನು ವಿಪಕ್ಷ ನಾಯಕನನ್ನಾಗಿ ಪ್ರಸ್ತಾಪಿಸುವ ಪತ್ರವನ್ನು ಸಲ್ಲಿಸಿದ್ದರು. ಬಂಡಾಯ ಶಾಸಕರು ತಮ್ಮ ಬಣವನ್ನು ಟಿಎಂಸಿಯ "ನೈಜ" ಶಾಸಕಾಂಗ ವಿಭಾಗವೆಂದು ಗುರುತಿಸಬೇಕೆಂದು ಪ್ರತಿಪಾದಿಸಿದ್ದರು.
ಟಿಎಂಸಿ ಶಾಸಕರಾದ ಜಾವೇದ್ ಖಾನ್, ಸಂದೀಪನ್ ಸಹಾ, ಸಬೀನಾ ಯಾಸ್ಮಿನ್ ಮತ್ತು ಸೆಯುಲಿ ಸಹಾ ಅವರನ್ನು ಸದನದಲ್ಲಿ ಉಪನಾಯಕರನ್ನಾಗಿ ಹೆಸರಿಸಲಾಗಿದೆ. ಅಖ್ರುಝ್ಝಮಾನ್ ಅವರನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.
ಕಳೆದ ವಾರ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಸ್ಪೀಕರ್ ಗೆ ಪತ್ರ ಬರೆದು ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರ ಹೆಸರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಮತ್ತು ಫಿರ್ಹಾದ್ ಹಕೀಮ್ ಅವರನ್ನು ಮುಖ್ಯ ಸಚೇತಕರನ್ನಾಗಿ ಪ್ರಸ್ತಾಪಿಸಿದ್ದರು.

