HEALTH TIPS

158 ವರ್ಷಗಳ ಬಳಿಕ ಹಿಮಾಲಯದ ತಪ್ಪಲಿನಲ್ಲಿ ಪತ್ತೆಯಾಯ್ತು ಅಪರೂಪದ ಸಸ್ಯ!

 ಹಿಮಾಲಯದ ತಪ್ಪಲಿನಲ್ಲಿ ಬರೋಬ್ಬರಿ 158 ವರ್ಷಗಳ ಹಿಂದೆ ಕಾಣೆಯಾಗಿದ್ದ ಅಪರೂಪದ ಹೂಬಿಡುವ ಸಸ್ಯವೊಂದು, ಹಲವು ದಶಕಗಳ ನಂತರ ಮತ್ತೆ ಪತ್ತೆಯಾಗಿದೆ. 


ಹಿಮಾಲಯ ಚಾರಣ ಹೊರಟಿದ್ದೀರಾ? ಶೆರ್ಪಾಗಳೇ ನಿಮ್ಮ ಜೀವಕ್ಕೆ ಕುತ್ತು ತಂದಾರು ಹುಷಾರ್!ಹಿಮಾಲಯ ಚಾರಣಿಗರಿಗೆ ಸಿಹಿ ಸುದ್ದಿ: ಉತ್ತರಾಖಂಡದ 83 ಶಿಖರಗಳು ಏರಲು ಮುಕ್ತಪ್ರವಾಸ: ಚಾರಣ ಬೇಡವೆನ್ನುತ್ತಾ ಹಿಮಾಲಯ ಏರಿದೆ!

ಈ ಅಪರೂಪದ ಸಸ್ಯದ ಹೆಸರು 'ಸಯಾಂಥಸ್ ಹೂಕರೀ'. ‌ಈ ಸಸ್ಯವನ್ನು ಮೊದಲಿಗೆ 1867ರಲ್ಲಿ, ಹಿಮಾಲಯದ ತಪ್ಪಲಿನ ಸಿಕ್ಕಿಂ ಪ್ರದೇಶದಲ್ಲಿ ಗುರುತಿಸಲಾಗಿತ್ತು. ಅಂದಿನ ಬ್ರಿಟಿಷ್ ಸಸ್ಯಶಾಸ್ತ್ರಜ್ಞ ಸರ್.ಜೋಸೆಫ್ ಡಾಲ್ಟನ್ ಹೂಕರ್, ಈ ಸಸ್ಯದ ಕುರಿತು ಮೊದಲ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಈ ಸಸ್ಯವು ಹಿಮಾಲಯದಿಂದಲೇ ಯಾರ ಕಣ್ಣಿಗೂ ಬೀಳದೆ ಮಾಯವಾಗಿತ್ತು.

ಇತ್ತೀಚೆಗೆ ಭಾರತೀಯ ಸಸ್ಯಶಾಸ್ತ್ರ ಸಮೀಕ್ಷೆ (ಬಿಎಸ್‌ಐ)ಯ ವಿಜ್ಞಾನಿಗಳು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಈ ಸಯಾಂಥಸ್ ಹೂಕರೀ ಸಸ್ಯವನ್ನು ಪತ್ತೆ ಮಾಡಿದ್ದಾರೆ.

ಈಶಾನ್ಯ ಟುಡೇ ಪ್ರಕಾರ, 1867ರಲ್ಲಿ ಸಿಕ್ಕಿಂನ ಪ್ರದೇಶದಲ್ಲಿ ಈ ಸುಂದರ ಹೂಬಿಡುವ ಸಸ್ಯವನ್ನು ಗುರುತಿಸಲಾಗಿತ್ತು. ಇದಾದ ಬಳಿಕ 2025ರ ಅಂತ್ಯದವರೆಗೂ ಈ ಸಸ್ಯ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇದೀಗ ಮತ್ತೆ ಈ ಸಸ್ಯವು ಅರುಣಾಚಲ ಪ್ರದೇಶದ ತವಾಂಗ್‌ ಜಿಲ್ಲೆಯ ಮಾಗೊ ಗ್ರಾಮದಿಂದ 1 ಕಿ.ಮೀ ದೂರದಲ್ಲಿರುವ ಚುನ ಕಣಿವೆಯ ಸಮೀಪದ ಸುಮಾರು 3,600 ಮೀಟರ್ ಎತ್ತರದಲ್ಲಿ ಪತ್ತೆಯಾಗಿದೆ.

ಬಿಎಸ್‌ಐ ಸಂಶೋಧಕರಾದ ಸುಭಜಿತ್ ಲಹಿರಿ, ಮೊನಾಲಿಸಾ ದಾಸ್ ಹಾಗೂ ಸುಧಾಂಶು ಶೇಖರ್ ದಾಶ್ ಅವರ ನೇತೃತ್ವದಲ್ಲಿ ಕ್ಷೇತ್ರ ಕಾರ್ಯ ಮಾಡುವ ವೇಳೆ ಇದು ಪತ್ತೆಯಾಗಿದ್ದು, ಈ ಜಾತಿಯ ಸಸ್ಯ ಅರುಣಾಚಲ ಪ್ರದೇಶದಲ್ಲಿ ದಾಖಲಾಗಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.

ಆಕರ್ಷಕ ನೀಲಿ ಬಣ್ಣದ ಸಯಾಂಥಸ್ ಹೂಕರೀ

ಸಯಾಂಥಸ್ ಹೂಕರೀ ಸಸ್ಯವು, ಬೆಲ್‌ಫ್ಲವರ್ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಮೂಲಿಕೆಯ ಸಸ್ಯವಾಗಿದೆ. ಸಂಶೋಧನೆಯ ಪ್ರಕಾರ, ಈ ಸಸ್ಯವು ಅರುಣಾಚಲ ಪ್ರದೇಶದಲ್ಲಿ ಕೇವಲ 3 ರಿಂದ 7 ಸಸ್ಯಗಳು ಮಾತ್ರ ಇರಬಹುದು. ಮಾತ್ರವಲ್ಲದೆ, ದೇಶದಲ್ಲಿ ಈ ಜಾತಿಯ ಸಸ್ಯಗಳ ಸಂಖ್ಯೆ 50 ಕ್ಕಿಂತ ಕಡಿಮೆ ಇರಬಹುದು ಎಂದು ಹೇಳಿದೆ.

ಅಪರೂಪದ 'ಸಯಾಂಥಸ್ ಹೂಕರೀ'.

ಸಯಾಂಥಸ್ ನೀಲಿ ಬಣ್ಣದ ಪುಟ್ಟ ಹೂ ಬಿಡುವ ಸಸ್ಯವಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಯಲ್ಲಿಯೂ ಬೆಳೆಯುವ ಗುಣ ಈ ಸಸ್ಯಕ್ಕಿದೆ. ಆಗಸ್ಟ್‌ನಿಂದ ಸೆಪ್ಟೆಂಬರ್ ನಡುವೆ ಹೂ ಬಿಡುತ್ತದೆ. ಇದು ಭೂತಾನ್, ಟಿಬೆಟ್‌, ಚೀನಾ, ನೇಪಾಳ ಮತ್ತು ಹಿಮಾಲಯದ ಕೆಲವು ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ.

ಈ ಸಸ್ಯವು 2,700 ರಿಂದ 4,500 ಮೀಟರ್‌ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ. ಮಾತ್ರವಲ್ಲದೆ, ಪೊದೆ, ಹುಲ್ಲುಗಾವಲುಗಳು ಮತ್ತು ಕಲ್ಲಿನ ನಡುವೆ ಹಾಗೂ ಇಳಿಜಾರಿನಿಂದ ಕೂಡಿದ ಸ್ಥಳಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ನ್ಯೂಸ್‌ಡ್ರಮ್ ವರದಿ ಪ್ರಕಾರ, ಸಂಶೋಧಕರು ಈ ಸಸ್ಯವನ್ನು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ ((IUCN) ಮಾನದಂಡದ ಅಡಿಯಲ್ಲಿ, ಭಾರತದ ಅಳಿವಿನಂಚಿನಲ್ಲಿರುವ ಅಪರೂಪದ ಸಸ್ಯ ಎಂದು ಪರಿಗಣಿಸಿ ಕೆಂಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದಾರೆ.

ಈ ಅಪರೂಪದ ಸಸ್ಯದ ಕುರಿತು ಮಾತನಾಡಿರುವ ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇನ್, 'ಈ ಸಸ್ಯವು ಭಾರತದಲ್ಲಿರುವ ಪ್ರಾಚೀನ ಸಸ್ಯ ಸಂಕುಲಕ್ಕೆ ಉದಾಹರಣೆಯಾಗಿದೆ. ಇದರ ಮರು ಸಂಶೋಧನೆಯು ಅರುಣಾಚಲ ಪ್ರದೇಶದ ಸಸ್ಯ ವೈವಿಧ್ಯತೆಯನ್ನು ಸಾರುತ್ತದೆ. ಹಿಮಾಲಯದ ಪರಿಸರ ಹಾಳಾಗುತ್ತಿದೆ ಎಂಬುಕ್ಕೆ ಈ ಸಸ್ಯದ ಅವನತಿ ಉದಾಹರಣೆಯಾಗಿದೆ' ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಜನಪದ ಕಥೆಗಳ ಪ್ರಕಾರ, ದುರ್ಗಮ ಬೆಟ್ಟಗಳ ಮೇಲೆ ಮಾತ್ರ ಈ ಸಸ್ಯಗಳು ಬೆಳೆಯುತ್ತವೆ. ಅವು ದೇವರಿಂದ ರಕ್ಷಿಸಲ್ಪಡುತ್ತವೆ. ಮನುಷ್ಯರು ಸುಲಭವಾಗಿ ಇವುಗಳನ್ನು ಹುಡುಕಲು ಸಾಧ್ಯವಿಲ್ಲ. ಹೀಗಾಗಿ, ಇಲ್ಲಿ ಬೆಳೆಯುವಂತಹ ಹೂಗಳು ಅಪರೂಪ ಹಾಗೂ ವಿಶೇಷ' ಎಂಬ ಉಲ್ಲೇಖಗಳಿವೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries