ಪಟ್ನಾ: ಆಡಳಿತ ಪಕ್ಷದ ಒತ್ತಡಕ್ಕೆ ಮಣಿದಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು, ಸುಮಾರು ಎರಡು ದಶಕಗಳ ನಂತರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ತಮ್ಮ ಸ್ವಂತ ಮನೆಗೆ ಸ್ಥಳಾಂತರಗೊಂಡಿದ್ದಾರೆ.
2005ರಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ರಾಬ್ಡಿ ದೇವಿ ಅವರಿಗೆ ಅಂದಿನ ನಿತೀಶ್ ಕುಮಾರ್ ಸರ್ಕಾರವು ಪಟ್ನಾದಲ್ಲಿ ರಾಜಭವನಕ್ಕೆ ಸಮೀಪವಿರುವ '10, ಸರ್ಕ್ಯುಲರ್ ರೋಡ್'ನಲ್ಲಿರುವ ಸರ್ಕಾರಿ ಬಂಗಲೆಯನ್ನು ಮಂಜೂರು ಮಾಡಿತ್ತು.
ಕಳೆದ ವರ್ಷ ನವೆಂಬರ್ನಲ್ಲಿ '10, ಸರ್ಕ್ಯುಲರ್ ರೋಡ್' ಬಂಗಲೆಯನ್ನು 'ಉಪ ಮುಖ್ಯಮಂತ್ರಿಗಳ ಅಧಿಕೃತ ನಿವಾಸ' ಎಂದು ಘೋಷಿಸಿದ ನಿತೀಶ್ ಕುಮಾರ್ ಸರ್ಕಾರ, ಬಂಗಲೆಯನ್ನು ಖಾಲಿ ಮಾಡುವಂತೆ ರಾಬ್ಡಿ ದೇವಿ ಅವರಿಗೆ ಸೂಚಿಸಿತ್ತು. ಅಲ್ಲದೇ '39, ಹಾರ್ಡಿಂಜ್ ರೋಡ್' ಬಂಗಲೆಯನ್ನು ಅವರಿಗೆ ಮಂಜೂರು ಮಾಡಿತ್ತು.
'39, ಹಾರ್ಡಿಂಜ್ ರೋಡ್' ಬಂಗಲೆಯಲ್ಲಿ ವಾಸವಿದ್ದ ಹಿಂದಿನ ಎಲ್ಲಾ ನಾಯಕರ ರಾಜಕೀಯ ಭವಿಷ್ಯವು ಕುಸಿದಿದ್ದರಿಂದ ಅಲ್ಲಿಗೆ ಸ್ಥಳಾಂತರಗೊಳ್ಳಲು ರಾಬ್ಡಿ ನಿರಾಕರಿಸಿದ್ದರು. ಅಂತಿಮವಾಗಿ '10, ಸರ್ಕ್ಯುಲರ್ ರೋಡ್' ಬಂಗಲೆಯಲ್ಲೇ ಉಳಿದಿದ್ದರು.
ಕಳೆದ ತಿಂಗಳು ಹೊಸ ಆದೇಶ ಹೊರಡಿಸಿದ್ದ ರಾಜ್ಯಭವನ ನಿರ್ಮಾಣ ಇಲಾಖೆಯು, ಜೂನ್ 29 ರೊಳಗೆ '10, ಸರ್ಕ್ಯುಲರ್ ರೋಡ್' ಬಂಗಲೆಯನ್ನು ಹಸ್ತಾಂತರಿಸಿ '38, ಹಾರ್ಡಿಂಜ್ ರೋಡ್' ಬಂಗಲೆಗೆ ಸ್ಥಳಾಂತರಗೊಳ್ಳುವಂತೆ ರಾಬ್ಡಿ ದೇವಿ ಅವರಿಗೆ ಸೂಚಿಸಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಅವರು, 'ಧೈರ್ಯವಿದ್ದರೆ ತಮ್ಮನ್ನು ಬಲವಂತವಾಗಿ ಖಾಲಿ ಮಾಡಿಸಲಿ' ಎಂದು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಸವಾಲು ಹಾಕಿದ್ದರು.
ಆದರೆ, ರಾಬ್ಡಿ ದೇವಿ ಅವರ ಈ ನಡವಳಿಕೆ ಆರ್ಜೆಡಿ ಪಕ್ಷಕ್ಕೆ ನಕಾರಾತ್ಮಕ ಪ್ರಚಾರ ಕೊಟ್ಟ ಹಿನ್ನೆಲೆ ತಕ್ಷಣ ಬಂಗಲೆ ಖಾಲಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ರಾಬ್ಡಿ ದೇವಿ ಅವರ ಕಿರಿಯ ಪುತ್ರ, ರಾಜ್ಯ ವಿಧಾನಸಭೆ ವಿರೋಧ ಪಕ್ಷ ನಾಯಕ ತೇಜಸ್ವಿ ಯಾದವ್ ಅವರು '2, ಪೋಲೋ ರೋಡ್'ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಪಕ್ಷದಿಂದ ಉಚ್ಚಾಟನೆಯಾಗಿರುವ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.

