ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಜಮ್ಮು ಪ್ರಾಂತ್ಯದ ಪೂಂಛ್ ಜಿಲ್ಲೆಯಲ್ಲಿ ದಿಢೀರ್ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ 25 ವರ್ಷದ ಮಹಿಳೆಯ ಮೃತದೇಹ ಪತ್ತೆಯಾದ ಬಳಿಕ ಈ ಸಂಖ್ಯೆ 29ಕ್ಕೇರಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈ ಪೈಕಿ ಕಾಶ್ಮೀರ ಕಣಿವೆಯ ಬಂಡಿಪೋರಾ ಜಿಲ್ಲೆಯಲ್ಲಿ ಇಬ್ಬರು ಹಾಗೂ ಬುಡ್ಗಾಮ್ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಆರು ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಜುಲೈ 18ರಂದು ಜಮ್ಮು ಪ್ರಾಂತ್ಯದಲ್ಲಿ ಸಂಭವಿಸಿದ್ದ ದಿಢೀರ್ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಯಾಸರ್ ಇಕ್ಬಾಲ್ ಅವರ ಪತ್ನಿ ಖಲೀದಾ ಕೌಸೇರ್ (25) ಅವರ ಮೃತದೇಹವು ಶೋಧ ಕಾರ್ಯಾಚರಣೆಯ ವೇಳೆ ಸುರಾನ್ ಕೋಟೆ ಸಮೀಪದ ಪಾದಚಾರಿ ಸೇತುವೆ ಬಳಿ ಪತ್ತೆಯಾಗಿದೆ.
ಗ್ರಾಮದ ಮುಖ್ಯಸ್ಥ ಝಾಕೀರ್ ಹುಸೈನ್ ಅವರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪತ್ತೆಹಚ್ಚಿದ್ದು, ಅದನ್ನು ಸುರಾನ್ ಕೋಟೆ ಉಪಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಈ ಮೃತದೇಹ ಪತ್ತೆಯಾದ ಬಳಿಕ ಪೂಂಛ್ ಜಿಲ್ಲೆಯಲ್ಲಿ ದಿಢೀರ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಜಮ್ಮು-ಕಾಶ್ಮೀರದ ಎಲ್ಲ ಜಿಲ್ಲೆಗಳ ಪೈಕಿ ಪೂಂಛ್ ಜಿಲ್ಲೆಯಲ್ಲೇ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.
ಜುಲೈ 18ರಂದು ಮುರ್ರಾ ಹ್ಯಾಮ್ಲೆಟ್ನಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರನ್ನು ನೂರ್ ಸಫಿಯಾ (59), ಮುಹಮ್ಮದ್ ಲತೀಫ್ ಅವರ ಪತ್ನಿ; ಸಾಜದ್ ಅಹ್ಮದ್ (16); ಹಕ್ ನವಾಝ್ ಅಹ್ಮದ್ (11); ಶಾನವಾಝ್ ಅಹ್ಮದ್ (11); ಯಾಸರ್ ಇಕ್ಬಾಲ್ ಅವರ ಪತ್ನಿ ಖಲೀದಾ ಕೌಸೇರ್ (25); ಸೋಫಿಯಾನ್ (2); ಮುಹಮ್ಮದ್ ಹುಸೈನ್ ಅವರ ಪತ್ನಿ ಬನೊ ಬಿ (60); ಹಾಗೂ ಮುಹಮ್ಮದ್ ಲಿಯಾಕತ್ ಅವರ ಪುತ್ರ ಮುಹಮ್ಮದ್ ಅಕ್ರಂ (7) ಎಂದು ಗುರುತಿಸಲಾಗಿದೆ.

