ನವದೆಹಲಿ: ಉತ್ತರಾಖಂಡದ 90 ವರ್ಷದ ಮಹಿಳೆಗೆ ಬೆದರಿಕೆ ಒಡ್ಡಿ, ಅವರಿಗೆ ಸೇರಿದ ನಾಲ್ಕು ಎಕರೆ ಜಾಗವನ್ನು ಕಬಳಿಸುವ ಯತ್ನ ನಡೆದಿದೆ. ಇದರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಅವರು ಶಾಮೀಲಾಗಿದ್ದಾರೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, 'ಗಾಂಧಿ-ವಾದ್ರಾ ಕುಟುಂಬದ ನಿಜವಾದ ವ್ಯವಹಾರ ರಾಜಕಾರಣವಲ್ಲ. ಜನರ ಜಮೀನನ್ನು ಕಬಳಿಸುವುದೇ ಅವರ ಕುಟುಂಬದ ಉದ್ಯಮ' ಎಂದು ಆರೋಪಿಸಿದರು.
ಬಿಜೆಪಿಯ ಆರೋಪಗಳಿಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವಾಗಲಿ, ಪ್ರಿಯಾಂಕಾ ಗಾಂಧಿ ಅಥವಾ ರಾಬರ್ಟ್ ವಾದ್ರಾ ಅವರಾಗಲಿ ಪ್ರತಿಕ್ರಿಯೆ ನೀಡಿಲ್ಲ.
'ಉಧಮ್ ಸಿಂಗ್ನಗರ ಜಿಲ್ಲೆಯ ಕಿಚ್ಛಾ ಗ್ರಾಮದಲ್ಲಿ ದಿವಂಗತ ಕುಲ್ಸುಮ್ ಖಾನ್ ಎಂಬವರಿಗೆ ಸೇರಿದ ನಾಲ್ಕು ಎಕರೆ ಜಾಗವಿದೆ. ಈಗ ಈ ಜಾಗವು ಕುಲ್ಸುಮ್ ಅವರ ಸಹೋದರಿ, 90 ವರ್ಷದ ನಸ್ರೀನ್ ಖಾನ್ ಸ್ವಾಧೀನದಲ್ಲಿದೆ. ರಾಬರ್ಟ್ ವಾದ್ರಾ ಸಹೋದರಿ ಸಾಯಿರಾ ವಾದ್ರಾ ಅವರು ಈ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ' ಎಂದು ಪ್ರದೀಪ್ ಭಂಡಾರಿ ಆರೋಪಿಸಿದರು.
'ಕಿಚ್ಛಾ ಕ್ಷೇತ್ರದ ಕಾಂಗ್ರೆಸ್ ಶಾಸಕ ತಿಲಕರಾಜ್ ಬೆಹಾರ್, 100ಕ್ಕೂ ಅಧಿಕ ತಮ್ಮ ಬೆಂಬಲಿಗರೊಂದಿಗೆ ಬುಧವಾರ ತಡರಾತ್ರಿ ಈ ಸ್ಥಳಕ್ಕೆ ಬಂದು, ಜಾಗ ಖಾಲಿ ಮಾಡುವಂತೆ ನಸ್ರೀನ್ ಖಾನ್ ಅವರಿಗೆ ಬೆದರಿಸಿದ್ದಾರೆ. ಜಾಗ ಖಾಲಿ ಮಾಡದಿದ್ದಲ್ಲಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ' ಎಂದು ಭಂಡಾರಿ ತಿಳಿಸಿದರು.
'ನ್ಯಾಯಮಾರ್ಗದ ಮೂಲಕ ಈ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಾಯಿರಾ ವಾದ್ರಾ ವಿಫಲರಾದ ಕಾರಣ, ಅದರ ಮಾಲೀಕರಿಗೆ ಬೆದರಿಕೆ ಒಡ್ಡಲು ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಸಾಯಿರಾ ಮುಂದೆ ನಿಂತು ಜಾಗ ಕಬಳಿಸಲು ಯತ್ನಿಸುತ್ತಿದ್ದರೂ, ಅವರಿಗೆ ಬೆಂಬಲವಾಗಿ ಪ್ರಿಯಾಂಕಾ ಹಾಗೂ ರಾಬರ್ಟ್ ವಾದ್ರಾ ಇದ್ದಾರೆ' ಎಂದು ಅವರು ಆರೋಪಿಸಿದರು.
'ನಸ್ರೀನ್ ಖಾನ್ ಅವರ ಹೇಳಿಕೆ ಆಧಾರದಲ್ಲಿ ಈ ಆರೋಪ ಮಾಡುತ್ತಿರುವೆ' ಎಂದ ಭಂಡಾರಿ, 'ಭೂ ಕಬಳಿಕೆ ಯತ್ನದಲ್ಲಿ ಕಾಂಗ್ರೆಸ್ ಶಾಸಕ ಮಾತ್ರ ಭಾಗಿಯಾಗಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ' ಎಂದು ಭಂಡಾರಿ ಆರೋಪಿಸಿದರು.
ಪ್ರದೀಪ್ ಭಂಡಾರಿ, ಬಿಜೆಪಿ ರಾಷ್ಟ್ರೀಯ ವಕ್ತಾರಯಾವುದೇ ಜಮೀನಿನ ಮೇಲೆ ಗಾಂಧಿ-ವಾದ್ರಾ ಕುಟುಂಬದ ಕಣ್ಣು ಬಿದ್ದರೆ ಸಾಕು ಮಾಲೀಕರು ಆ ಜಾಗ ಖಾಲಿ ಮಾಡುವವರೆಗೆ ಈ ಕುಟುಂಬ ಅವರನ್ನು ಬೆದರಿಸುತ್ತದೆ ಎನ್ನಲಾಗುತ್ತದೆ. ದೇಶದ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು.

