ಅಯೋಧ್ಯೆ (PTI): ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್ ಅವರನ್ನು 'ಗೃಹ ಬಂಧನ'ದಿಂದ ಬಿಡುಗಡೆ ಮಾಡಿದ ಬಳಿಕ ಅವರು ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಹನುಮಾನಗಢಿ ಮತ್ತು ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, 'ದೇಗುಲದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ. ರಾಮಮಂದಿರದ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸಬೇಕು' ಎಂದು ಹೇಳಿದರು.
ರಾಮಮಂದಿರ ಟ್ರಸ್ಟ್ ಅನ್ನುವಿಸರ್ಜಿಸಬೇಕು. ಸಂತರು, ಶಂಕರಾಚಾರ್ಯರು ಮತ್ತು ಅಯೋಧ್ಯೆಯ ನಿವಾಸಿಗಳು ಟ್ರಸ್ಟ್ನಸದಸ್ಯರಾಗಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೂ ಮೊದಲು ರಾಮಮಂದಿರಕ್ಕೆ ಭೇಟಿ ನೀಡಲು ಹೊರಟಿದ್ದ ಕಾಂಗ್ರೆಸ್ ನಿಯೋಗವನ್ನು ಆಡಳಿತವು ತಡೆದಿತ್ತು ಎಂದು ರಾಯ್ ಆರೋಪಿಸಿದ್ದಾರೆ.
'ಗೃಹ ಬಂಧನ'ವನ್ನು ಖಂಡಿಸಿ ಆಚಾರ್ಯ ನರೇಂದ್ರ ದೇವ್ ವಿಶ್ವವಿದ್ಯಾಲಯದ ಆವರಣದ ಹೊರಗೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪಕ್ಷದ ನಾಯಕರಿಗೆ ದೇಗುಲ ಭೇಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.
ಶೋಧ: ಪ್ರಕರಣಕ್ಕೆ ಸಂಬಂಧಿಸಿದಂತೆ ಅಯೋಧ್ಯೆ ಪೊಲೀಸರು ಹಲವೆಡೆ ಶೋಧ ನಡೆಸಿ, ಕ್ಯುಆರ್ ಕೋಡ್ ಅಂಟಿಸಿದ್ದ ದೇಣಿಗೆ ಡಬ್ಬಗಳು, ನಗದು, ಚಿನ್ನ, ಬೆಳ್ಳಿಯನ್ನು ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.

