ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಸಿನಿಮಾ ಶೈಲಿಯಲ್ಲಿ ಗಂಡನನ್ನು ಕೊಲ್ಲಲು ಹೆಂಡತಿಯೇ ಸಂಚು ರೂಪಿಸಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವಿಮೆ ಹಣ ಹಾಗೂ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿವಿಷಪೂರಿತ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ದಾಮಿನಿ ಪನ್ವಾರ್ ಬಂಧಿತ ಮಹಿಳೆಯಾಗಿದ್ದು, ಈಕೆಗೆ ಸಾಥ್ ನೀಡಿದ ಪ್ರಿಯಕರ ತುಷಾರ್ ಮತ್ತು ಇಬ್ಬರು ಹಾವಾಡಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಕೊಲೆಯಾದ ಅತುಲ್ ಕುಮಾರ್ ಪನ್ವಾರ್ ಮತ್ತು ದಾಮಿನಿ ದಂಪತಿಗೆ ಏಳು ವರ್ಷಗಳ ಹಿಂದೆ ಮದುವೆಯಾಗಿತ್ತು. ಅತುಲ್ ಸ್ವಂತ ಶಾಲೆಯೊಂದನ್ನು ನಡೆಸುತ್ತಿದ್ದರು. ಇದೇ ಶಾಲೆಯಲ್ಲಿ ಬಸ್ ಚಾಲಕನಾಗಿದ್ದ ತುಷಾರ್ ಎಂಬಾತನೊಂದಿಗೆ ದಾಮಿನಿ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇಬ್ಬರ ಪ್ರೇಮ ಪುರಾಣಕ್ಕೆ ಪತಿ ಅತುಲ್ ಅಡ್ಡಿಯಾಗಿದ್ದಲ್ಲದೆ, ಅತುಲ್ ಹೆಸರಲ್ಲಿದ್ದ ₹ 20 ಲಕ್ಷದ ವಿಮೆ ಹಣವನ್ನು ಲಪಟಾಯಿಸಲು ಇಬ್ಬರೂ ಸೇರಿ ಈ ಸಂಚು ರೂಪಿಸಿದ್ದರು.
ಕೊಲೆಯ ಸಂಚು ರೂಪಿಸಿದ್ದು ಹೇಗೆ?
ಅತುಲ್ನನ್ನು ಕೊಲ್ಲಲು ಈ ಜೋಡಿ ಇಬ್ಬರು ಹಾವಾಡಿಗರನ್ನು ಸಂಪರ್ಕಿಸಿ, ವಿಷಪೂರಿತ ಹಾವನ್ನು ತಂದುಕೊಡಲು ₹5 ಲಕ್ಷದ ಆಮಿಷ ಒಡ್ಡಿದ್ದರು. ಯೋಜನೆ ಪ್ರಕಾರ, ದಾಮಿನಿ ತನ್ನ ಪತಿಗೆ ಅಮಲೇರಿಸುವ ಪದಾರ್ಥವನ್ನು ಹಾಲಿನಲ್ಲಿ ಬೆರೆಸಿ ಶುಕ್ರವಾರ ರಾತ್ರಿ ನೀಡಿದ್ದಾಳೆ. ಅತುಲ್ ಪ್ರಜ್ಞೆ ತಪ್ಪಿ ಮಲಗಿದ ತಕ್ಷಣ, ಪ್ರಿಯಕರ ತುಷಾರ್ ಹಾಗೂ ಹಾವಾಡಿಗರ ಸಹಾಯದಿಂದ ವಿಷಪೂರಿತ ಹಾವಿನಿಂದ ಅತುಲ್ ಕಾಲಿಗೆ ಕಚ್ಚಿಸಿ ಹತ್ಯೆ ಮಾಡಲಾಗಿದೆ.
ಪೊಲೀಸ್ ತನಿಖೆಯಿಂದ ಬಯಲಾದ ಸತ್ಯ
ಶುಕ್ರವಾರ ಬೆಳಿಗ್ಗೆ ಅತುಲ್ ಶವವಾಗಿ ಪತ್ತೆಯಾಗಿದ್ದರು. ಕಾಲಿನ ಮೇಲೆ ಹಾವಿನ ಕಡಿತದ ಗುರುತುಗಳಿದ್ದರಿಂದ ಆರಂಭದಲ್ಲಿ ಇದು ಸಹಜ ಸಾವು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಅನುಮಾನಗೊಂಡು ತನಿಖೆ ಚುರುಕುಗೊಳಿಸಿದಾಗ ಅಸಲಿ ಸತ್ಯ ಹೊರಬಂದಿದೆ.
ಆರೋಪಿ ದಾಮಿನಿ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಹಾವಿನ ಫೋಟೊ ಹಾಗೂ ಹಾವಾಡಿಗರೊಂದಿಗೆ ಆಕೆ ನಡೆಸಿದ್ದ ವಾಟ್ಸಾಪ್ ಚಾಟ್ಗಳು ಪತ್ತೆಯಾಗಿವೆ. ಈ ಡಿಜಿಟಲ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಶನಿವಾರದಂದು ದಾಮಿನಿ, ತುಷಾರ್ ಮತ್ತು ಇಬ್ಬರು ಹಾವಾಡಿಗರನ್ನು ಬಂಧಿಸಿದ್ದಾರೆ.

