ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ ಭಾರತದ ಮಧ್ಯಭಾಗ ಮತ್ತು ಪಶ್ಚಿಮ ಕರಾವಳಿಯ ಎಂಟು ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
'ರೆಡ್ ಅಲರ್ಟ್' ಘೋಷಣೆ:
ಹವಾಮಾನ ಇಲಾಖೆಯು ಸೋಮವಾರದಂದು ಛತ್ತೀಸಢ, ಮಧ್ಯ ಮಹಾರಾಷ್ಟ್ರ ಮತ್ತು ಪೂರ್ವ ಗುಜರಾತ್ ಪ್ರದೇಶಗಳಿಗೆ 'ರೆಡ್ ಅಲರ್ಟ್' ಘೋಷಿಸಿತ್ತು. ಮಂಗಳವಾರದಂದೂ ಪೂರ್ವ ಗುಜರಾತ್ನಲ್ಲಿ ರೆಡ್ ಅಲರ್ಟ್ ಮುಂದುವರಿಯಲಿದ್ದು, ಛತ್ತೀಸಢ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಮಳೆಯ ತೀವ್ರತೆ ಕೊಂಚ ಕಡಿಮೆಯಾಗಿ 'ಆರೆಂಜ್ ಅಲರ್ಟ್' ಜಾರಿಯಲ್ಲಿದೆ. ಮುಂದಿನ 2-3 ದಿನಗಳಲ್ಲಿ ಈ ಪ್ರದೇಶಗಳಲ್ಲಿ 200 ಮಿಮೀಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಭಾನುವಾರ ಮಹಾರಾಷ್ಟ್ರದ ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ದಾಖಲೆ ಮಟ್ಟದ ಮಳೆಯಾಗಿದೆ. ರಾಯಗಢದ ಭೀರಾದಲ್ಲಿ 386 ಮಿಮೀ, ಪುಣೆಯ ತಾಮಿನಿನಲ್ಲಿ 310 ಮಿಮೀ, ಪಾಲ್ಘರ್ನ ಶ್ರಿಗಾಂವ್ನಲ್ಲಿ 275 ಮಿಮೀ, ಮುಂಬೈನ ಕೊಲಾಬಾದಲ್ಲಿ 265 ಮಿಮೀ ಮಳೆ ದಾಖಲಾಗಿದೆ.
ಮಹಾರಾಷ್ಟ್ರದ ಹೊರತಾಗಿ ಒಡಿಶಾದ ಕಂಧಮಾಲ್, ಕಟಕ್ ಮತ್ತು ನವಾಪಾರ ಜಿಲ್ಲೆಗಳಲ್ಲೂ 190 ಮಿಮೀ ಇಂದ 280 ಮಿಮೀ ಮಳೆಯಾಗಿದೆ.
ವಾಯುಭಾರ ಕುಸಿತ
ಹವಾಮಾನ ಇಲಾಖೆಯ ಪ್ರಕಾರ, ಭಾನುವಾರ ಮಧ್ಯಾಹ್ನ ಒಡಿಶಾದ ಬಾಲೇಶ್ವರ ಆಗ್ನೇಯ ಮತ್ತು ಪಶ್ಚಿಮ ಬಂಗಾಳದ ದಿಘಾದ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಕೇಂದ್ರಿಕೃತವಾಗಿತ್ತು. ಮಂಗಳವಾರದ ವೇಳೆಗೆ ಉತ್ತರ ಒಡಿಶಾ ಮತ್ತು ಉತ್ತರ ಛತ್ತೀಸಢದ ಕಡೆಗೆ ಚಲಿಸಿದೆ. ಇದು ಸಾಗುವ ಇಡೀ ಮಾರ್ಗದುದ್ದಕ್ಕೂ ವ್ಯಾಪಕ ಮಳೆಯಾಗಲಿದೆ.
ಜೂನ್ ತಿಂಗಳ ಅಂತ್ಯಕ್ಕೆ ದೇಶದಲ್ಲಿ ಶೇ30 ರಷ್ಟು ಮಳೆ ಕೊರತೆಯಾಗಿತ್ತು. ಆದರೆ ಜುಲೈ ಆರಂಭದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ, ಭಾನುವಾರದ ವೇಳೆಗೆ ಮಳೆ ಕೊರತೆಯ ಪ್ರಮಾಣ ಶೇ24 ಕ್ಕೆ ಇಳಿಕೆಯಾಗಿದೆ.
ದೇಶದಾದ್ಯಂತ ಮುಂಗಾರು ಪ್ರವೇಶ
ಜುಲೈ ಆರಂಭದೊಂದಿಗೆ ನೈರುತ್ಯ ಮುಂಗಾರು ದೇಶದಾದ್ಯಂತ ತೀವ್ರಗೊಂಡಿದೆ. ಪ್ರಸ್ತುತ ಮುಂಗಾರು ಮಾರುತಗಳು ಗುಜರಾತ್ನ ಜಾಮ್ನಗರ್, ರಾಜಸ್ಥಾನದ ಉದಯಪುರ, ಅಜ್ಮೀರ್, ಹರಿಯಾಣದ ಹಿಸಾರ್ ಮತ್ತು ಪಂಜಾಬ್ನ ಬತಿಂಡಾ ರೇಖೆಯವರೆಗೆ ತಲುಪಿವೆ. ಸಾಮಾನ್ಯವಾಗಿ ಜುಲೈ 8ರೊಳಗೆ ಮುಂಗಾರು ಇಡೀ ದೇಶವನ್ನು ವ್ಯಾಪಿಸಬೇಕಾಗಿತ್ತು. ಈ ಬಾರಿ ನಿಗದಿತ ಸಮಯಕ್ಕೆ ಅಥವಾ ಸ್ವಲ್ಪ ವಿಳಂಬವಾಗಿ ದೇಶವನ್ನು ವ್ಯಾಪಿಸುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳಲ್ಲಿ ಗುಜರಾತ್, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ಉಳಿದ ಭಾಗಗಳಿಗೆ ಮುಂಗಾರು ವ್ಯಾಪಿಸುವ ಪೂರಕ ವಾತಾವರಣವಿದೆ ಎಂದು ಐಎಂಡಿ ತಿಳಿಸಿದೆ.

