ನವದೆಹಲಿ: ಇತ್ತೀಚೆಗೆ ರಾಷ್ಟ್ರವ್ಯಾಪಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿರುವ ಹೊರತಾಗಿಯೂ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗುತ್ತಿದೆ ಅಥವಾ ಬಂಧಿಸಲಾಗುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಗೌರವಿಸಬೇಕು. ಬಂಧಿತರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಹಾಗೂ ದೇಶದ ಯಾವುದೇ ಭಾಗದಲ್ಲೂ ಪ್ರತಿಭಟನಾಕಾರರ ವಿರುದ್ಧ ಬಲವಂತದ ಅಥವಾ ಸೇಡಿನ ಕ್ರಮ ಕೈಗೊಳ್ಳಬಾರದು ಎಂದು ಸಿಜೆಪಿ ಮನವಿ ಮಾಡಿದೆ.
ಈ ಸಂಬಂಧ ದಾಖಲಾಗಿರುವ ಎಫ್ಐಆರ್ಗಳನ್ನು ಸಹ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಸರ್ಕಾರ ತನ್ನ ಮಾತಿಗೆ ಬದ್ಧವಾಗಿರುತ್ತದೆ ಎಂಬ ನಂಬಿಕೆಯ ಆಧಾರದಲ್ಲಿ ನಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದವು. ಆದರೆ ನೀವು ನೀಡಿದ ಭರವಸೆಯನ್ನು ಪಾಲಿಸದಿರುವುದು ಸಿಜೆಪಿಗೆ ಮಾಡುವ ದ್ರೋಹ ಮಾತ್ರವಲ್ಲ, ಪ್ರತಿಭಟನೆಯ ಬದಲು ಮಾತುಕತೆಯ ಹಾದಿ ಆಯ್ದುಕೊಂಡ ಲಕ್ಷಾಂತರ ಯುವ ಭಾರತೀಯರಿಗೆ ಮಾಡುವ ನಂಬಿಕೆದ್ರೋಹವೂ ಆಗಿದೆ ಎಂದು ಹೇಳಿದೆ.
ನೀಟ್ ಸೇರಿದಂತೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಿದ್ದ 36 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಕೇಂದ್ರ ಸರ್ಕಾರದ ಭರವಸೆ ಮೇರೆಗೆ ಹಿಂಪಡೆಯಲಾಗಿತ್ತು. ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.
ಕೇಂದ್ರ ಸಚಿವರಾದ ಜಿ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರದ ಪರ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರು.
ಈ ನಡುವೆ ಬಂಧನಕ್ಕೊಳಗಾದವರನ್ನು ಬಿಡುಗಡೆ ಮಾಡಲು ಹಾಗೂ ಅವರಿಗೆ ಕಾನೂನು ನೆರವು ನೀಡಲು ಆಯಾ ರಾಜ್ಯಗಳ ವಕೀಲರೊಂದಿಗೆ ತಮ್ಮ ಕಾನೂನು ತಂಡವು ಸತತ ಸಂಪರ್ಕದಲ್ಲಿದೆ ಎಂದು ಸಿಜೆಪಿ ತಿಳಿಸಿದೆ.

