ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂಗಾರು ಆರ್ಭಟ ಜೋರಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
ಬುಧವಾರ ರಾತ್ರಿಯಿಡೀ ಸುರಿದ ಮಳೆ ಗುರುವಾರ ಬೆಳಿಗ್ಗೆಯೂ ಮುಂದುವರಿದಿದ್ದರಿಂದ ಹಲವೆಡೆ ಮರಗಳು ಧರೆಗುರುಳಿವೆ.
ಇದರ ಬೆನ್ನಲ್ಲೇ, ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) 'ರೆಡ್' ಅಲರ್ಟ್ ಘೋಷಿಸಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ದೆಹಲಿ ನಗರದಲ್ಲಿ ಕನಿಷ್ಠ ತಾಪಮಾನವು 24.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3.6 ಡಿಗ್ರಿಯಷ್ಟು ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಗಳು ಉರುಳಿಬಿದ್ದಿದ್ದರಿಂದ ವಾಹನಗಳು ಜಖಂಗೊಂಡಿರುವುದು ಮತ್ತು ರಸ್ತೆಗಳು ಜಲಾವೃತಗೊಂಡಿರುವುದರಿಂದ ನಗರದಾದ್ಯಂತ ಭಾರಿ ಸಂಚಾರ ದಟ್ಟಣೆ ಉಂಟಾಗಿರುವ ದೃಶ್ಯಗಳು ಕಂಡುಬಂದಿವೆ.
ವಿಕಾಸ್ ಮಾರ್ಗ, ಪೂರ್ವ ದೆಹಲಿಯ ಕೆಲವು ಪ್ರದೇಶಗಳು, ದೆಹಲಿ ರೈಲ್ವೆ ನಿಲ್ದಾಣ, ಮುನಿರ್ಕಾ, ಸದರ್ ಬಜಾರ್ ಮತ್ತು ದ್ವಾರಕಾ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ.

