ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ತೆರವುಗೊಳಿಸಿದ ಆರಿಕ್ಕಾಡಿ ಬಸ್ ಪ್ರಯಾಣಿಕರ ತಂಗುದಾಣವನ್ನು ಮರು ಸ್ಥಾಪಿಸಬೇಕೆಂಬ ನಾಗರಿಕರು ಹಾಗೂ ಪ್ರಯಾಣಿಕರು ಹಲವು ಕಾಲದಿಂದ ಒತ್ತಾಯಿಸುತ್ತಾ ಬಂದರೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಧಿಕಾರಿಗಳು ಹಾಗೂ ಪಂಚಾಯತಿ ನಿರ್ಲಕ್ಷ್ಯ ನಿಲುವು ತೋರಿಸಿದ ಹಿನ್ನೆಲೆಯಲ್ಲಿ ಮೀನು ಕಾರ್ಮಿಕನೂ, ಸಾಮಾಜಿಕ ಕಾರ್ಯಕರ್ತನೂ ಆದ ಆರಿಫ್ ಕಡವತ್ ಸ್ವಂತ ಹಣ ಖರ್ಚುಮಾಡಿ ತಂಗುದಾಣ ನಿರ್ಮಿಸಿ ಮಾದರಿಯಾಗಿದ್ದಾರೆ.
ಬಿಸಿಲು ಹಾಗೂ ಮಳೆಗೆ ಆರಿಕ್ಕಾಡಿಯಲ್ಲಿ ಬಸ್ಗಾಗಿ ಕಾದು ನಿಲ್ಲಲು ತಂಗುದಾಣವಿಲ್ಲದಿರುವುದು ಪ್ರಯಾಣಿಕರಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸಿತ್ತು. ಇದರಿಂದ ಇಲ್ಲಿ ತಂಗುದಾಣ ನಿರ್ಮಿಸುವಂತೆ ನಾಗರಿಕರು ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಮಳೆಗಾಲ ಆರಂಭಗೊಂಡರೂ ಜನರ ಬೇಡಿಕೆಯನ್ನು ಪರಿಗಣಿಸಲು ಅಧಿಕಾರಿಗಳು ಮುಂದಾಗಿರಲಿಲ್ಲ.
ಆರಿಕ್ಕಾಡಿ ಪಿಎಚ್ಸಿಗೆ ಆಗಮಿಸುವ ರೋಗಿಗಳು, ಮೀನು ಕಾರ್ಮಿಕರು, ಹನುಮಾನ್ ಕ್ಷೇತ್ರಕ್ಕೆ ತಲುಪುವವರು, ಕೋಟೆ ಸಂದರ್ಶಿಸುವವರು ಇದೇ ಸ್ಥಳದಲ್ಲಿ ಬಸ್ ಇಳಿಯುತ್ತಿದ್ದಾರೆ. ಹಾಗೂ ಮರಳಿ ಪ್ರಯಾಣಿಸಲು ಕಾದು ನಿಲ್ಲುತ್ತಿದ್ದಾರೆ. ಮಳೆ ತೀವ್ರಗೊಳ್ಳುವುದರೊಂದಿಗೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಮನಗಂಡು ಸ್ವಂತ ಹತ್ತು ಸಾವಿರಕ್ಕೂ ಹೆಚ್ಚು ರೂ. ವೆಚ್ಚ ಭರಿಸಿ ತಾತ್ಕಾಲಿಕ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಆರಿಫ್ ಮಾದರಿಯಾಗಿದ್ದಾರೆ. ಆರಿಫ್ರ ಈ ಮಾದರಿ ಕಾರ್ಯವನ್ನು ನಾಗರಿಕರು ಅಭಿನಂದಿಸಿದ್ದಾರೆ.

.jpg)
.jpg)
