ಲಂಡನ್/ನವದೆಹಲಿ: 'ಭಾರತದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಚಳವಳಿಯು ಜನಶಕ್ತಿಯ ನಿಜವಾದ ಅರ್ಥವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ' ಎಂದು ಸ್ವೀಡನ್ನ ಜನಪ್ರಿಯ ಪರಿಸರ ಹೋರಾಟಗಾರ್ತಿ ಗ್ರೆಟ್ಟಾ ಥುನ್ಬರ್ಗ್ ಹೊಗಳಿದ್ದಾರೆ.
ಲಂಡನ್ನಲ್ಲಿ ಎಸ್ಎಫ್ಐ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಭಾರತೀಯ ಯುವಜನತೆಯ ಈ ಹೋರಾಟವು ಜಾಗತಿಕ ಮಟ್ಟದಲ್ಲಿ ಯುವಜನರಿಗೆ ಹೊಸ ಭರವಸೆ ನೀಡಿದೆ' ಎಂದು ಹೇಳಿದರು.
'ಭಾರತೀಯ ವಿದ್ಯಾರ್ಥಿಗಳ ಹೋರಾಟವು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಜನರು ಒಗ್ಗೂಡಿ ಪ್ರತಿಭಟಿಸಿದಾಗ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಚಳವಳಿ ಸಾಕ್ಷಿಯಾಗಿದೆ. ಇದು ಜನಶಕ್ತಿಯ ನಿಜವಾದ ಅರ್ಥವನ್ನು ನಿರೂಪಿಸಿದೆ. ನ್ಯಾಯ, ಪ್ರಜಾಪ್ರಭುತ್ವ ಪರವಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಈ ಹೋರಾಟವು ನಮ್ಮೆಲ್ಲರ ಹೋರಾಟವೂ ಹೌದು. ಹೀಗಾಗಿ ನಾವೆಲ್ಲರೂ ಭಾರತದ ಯುವಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲಬೇಕಿದೆ' ಎಂದಿದ್ದಾರೆ.
ನೀಟ್ ಹಾಗೂ ಪರೀಕ್ಷಾ ಪ್ರಶ್ನೆ ಪತ್ರಿಕೆ ಅಕ್ರಮ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಹಾಗೂ ದೇಶದಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಅಂತಿಮವಾಗಿ ಸಿಜೆಪಿ ಹೋರಾಟಕ್ಕೆ ಮಣಿದಿದ್ದ ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿಜಯದ ಸಂಭ್ರಮಾಚರಣೆಯ ಭಾಗವಾಗಿ ಲಂಡನ್ನಲ್ಲಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು.

