ಕೋಲ್ಕತಾ: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣಕ್ಕೆ ರವಿವಾರ ಮತ್ತೊಂದು ಆಘಾತ ಎದುರಾಗಿದ್ದು, ಪಶ್ಚಿಮ ಬಂಗಾಳದ ಮಾಜಿ ಸಚಿವ ಹಾಗೂ ಹಿರಿಯ ಟಿಎಂಸಿ ನಾಯಕ ರಬೀಂದ್ರನಾಥ ಘೋಷ್ ಅವರು ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿದ್ದಾರೆ. ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ರಾಜಕೀಯ ಸಮಾಲೋಚಕ ಸಂಸ್ಥೆ 'ಐ ಪ್ಯಾಕ್' ವಿರುದ್ಧ ಬಲವಾದ ಟೀಕಾಪ್ರಹಾರ ನಡೆಸಿರುವ ರಬೀಂದ್ರನಾಥ ಅವರು, ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲಿಗೆ ಪಕ್ಷದ ಮೇಲೆ ಇವರಿಬ್ಬರ ಹಿಡಿತ ಕಾರಣವೆಂದು ಆಪಾದಿಸಿದ್ದಾರೆ.
ಸೋದರಪುತ್ರನಾದ ಅಭಿಷೇಕ್ ಬ್ಯಾನರ್ಜಿ ಅವರನ್ನು ಮಮತಾ ಅವರು ಸಕ್ರಿಯ ರಾಜಕಾರಣದಿಂದ ಬದಿಗೆಸರಿಸಿದರೆ ಮಾತ್ರವೇ ಬಹುತೇಕ ಬಂಡಾಯ ನಾಯಕರು ಮಮತಾ ಅವರ ಪಾಳಯಕ್ಕೆ ಮರಳಲಿದ್ದಾರೆಂದು ರಬೀಂದ್ರನಾಥ ಘೋಷ್ ಹೇಳಿದ್ದಾರೆ.
ರಬೀಂದ್ರನಾಥ್ ಅವರು ಟಿಎಂಸಿಯ ಜಿಲ್ಲಾಧ್ಯಕ್ಷರಾಗಿ ಎರಡು ದಶಕಗಳಿಗೂ ಹೆಚ್ಚು ಸಮಯ ಕಾರ್ಯನಿರ್ವಹಿಸಿದ್ದರು ಹಾಗೂ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ದೀರ್ಘಕಾಲದ ಸಹವರ್ತಿಯಾಗಿದ್ದರು.
ಮಮತಾ ವಿರುದ್ಧ ಬಂಡೆದ್ದಿರುವ ಟಿಎಂಸಿ ನಾಯಕರು, ಪಕ್ಷದ ಮೇಲೆ ನಿಯಂತ್ರಣ ಸಾಧಿಸುವ ಯತ್ನವಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಪರ್ಯಾಯ ಸಮಿತಿಗಳನ್ನು ರಚಿಸಿದ 24 ತಾಸುಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಬಿರ್ಭೂಮ್ ಜಿಲ್ಲೆಯ ಪ್ರಬಲ ಟಿಎಂಸಿ ನಾಯಕ ಅನುಬ್ರತ ಮೊಂಡಲ್ ಸೇರಿದಂತೆ ಮಮತಾ ಬ್ಯಾನರ್ಜಿ ಅವರ ದೀರ್ಘಕಾಲದ ಅನೇಕ ನಿಷ್ಠಾವಂತರ ಬಂಡಾಯ ಬಣವನ್ನು ಸೇರಿರುವುದು ಮಮತಾಗೆ ಭಾರೀ ಹಿನ್ನಡೆಯುಂಟು ಮಾಡಿದೆ.
ಅಭಿಷೇಕ್ ಅವರ ಮನಸೋ ಇಚ್ಛೆಯ ಪ್ರಕಾರ 80ಕ್ಕೂ ಅಧಿಕ ಹಾಲಿ ಶಾಸಕರಿಗೆ ಹಾಗೂ ಸಚಿವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವುದ್ತು ಹಾಗೂ ಹಲವಾರು ಮಂದಿಯನ್ನು ಪಕ್ಷದ ಸಾಂಸ್ಥಿಕ ಹುದ್ದೆಗಳಿಂದ ಕಿತ್ತುಹಾಕಿರುವುದು ಪಕ್ಷದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಘೋಷ್ ತಿಳಿಸಿದ್ದಾರೆ.

