ನವದೆಹಲಿ: ಮಧ್ಯಪ್ರದೇಶ ಸರ್ಕಾರವು ನಮಾಜ್ ಮಾಡಲು ಗುರುತಿಸಿರುವ ಪರ್ಯಾಯ ಸ್ಥಳವು ಧಾರ್ನ ವಿವಾದಿತ ಭೋಜಶಾಲಾ ಸಂಕೀರ್ಣಕ್ಕಿಂತ ತುಂಬಾ ದೂರದಲ್ಲಿದೆ ಎಂದು ಆರೋಪಿಸಿ ಮುಸ್ಲಿಮರು ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ವಿವಾದಿತ ಸಂಕೀರ್ಣದ ಪಕ್ಕದಲ್ಲಿ ಪರ್ಯಾಯ ಪ್ರಾರ್ಥನಾ ಸ್ಥಳವನ್ನು ಒದಗಿಸುವ ಸಾಧ್ಯತೆಯ ಕುರಿತು ಮಧ್ಯಪ್ರದೇಶ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನ ಅವರನ್ನೊಳಗೊಂಡ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ.
ಮುಸ್ಲಿಮರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹುಜೆಫಾ ಅಹ್ಮದಿ ಅವರು, 'ಪ್ರಾರ್ಥನೆಗಾಗಿ ಭೋಜಶಾಲಾ ಸ್ಥಳದ ಬಳಿ ಮುಕ್ತ ಸ್ಥಳವನ್ನು ಒದಗಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಅಧಿಕಾರಿಗಳು ಗುರುತಿಸಿದ ಭೂಮಿ ಸುಮಾರು 2 ಕಿ.ಮೀ. ದೂರದಲ್ಲಿದೆ' ಎಂದು ಅವರು ಆರೋಪಿಸಿದ್ದಾರೆ.
ಜುಲೈ 14ರಂದು ವಿವಾದಿತ ಭೋಜಶಾಲಾ ಸಂಕೀರ್ಣವನ್ನು ಸರಸ್ವತಿ ದೇವಾಲಯ ಎಂದು ಘೋಷಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ನ ತೀರ್ಪಿನ ವಿರುದ್ಧ ಮುಸ್ಲಿಮರು ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ಪೀಠವು, ಪ್ರಕರಣ ಇತ್ಯರ್ಥವಾಗುವವರೆಗೆ ಶುಕ್ರವಾರ ಮಧ್ಯಾಹ್ನ 1ರಿಂದ 3ರವರೆಗೆ ನಮಾಜ್ ಮಾಡಲು ವಿವಾದಿತ ಸ್ಥಳದ ಪಕ್ಕದಲ್ಲಿ ಪ್ರತ್ಯೇಕ ತೆರೆದ ಜಾಗವನ್ನು ಒದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

