ಮಣಿಪುರ(PTI): ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಅನಧಿಕೃತ ತಪಾಸಣಾ ಕೇಂದ್ರಗಳ ತೆರವಿಗೆ ನೀಡಿದ್ದ 48 ಗಂಟೆಗಳ ಗಡುವು ಕೊನೆಗೊಂಡಿದೆ. ಅಗತ್ಯ ವಸ್ತುಗಳ ಸುಗಮ ಸಾಗಣೆ ಖಾತ್ರಿಪಡಿಸಲು ಪ್ರಯತ್ನ ನಡೆಸಿದ ವೇಳೆ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತನ್ನನ್ನು ಹೊಣೆ ಮಾಡಬಾರದು ಎಂದು ಕಾಂಗ್ಪೋಕ್ಪಿ ಜಿಲ್ಲೆಯ ಕುಕಿ-ಜೋ ಸಂಘಟನೆಯೊಂದು ಸೋಮವಾರ ಎಚ್ಚರಿಸಿದೆ.
ಈ ಕುರಿತು 'ಕಮಿಟಿ ಆನ್ ಟ್ರೈಬಲ್ ಯುನಿಟಿ'(ಸಿಒಟಿಯು) ಪ್ರಕಟಣೆ ನೀಡಿದ್ದು,'ಗಡುವಿನ ಒಳಗಾಗಿ, ರಾಷ್ಟ್ರೀಯ ಹೆದ್ದಾರಿ-2ರ ಮೂಲಕ ವೈದ್ಯಕೀಯ ಸಾಮಗ್ರಿಗಳು ಸೇರಿ ಅಗತ್ಯ ವಸ್ತುಗಳ ಮುಕ್ತ ಸಾಗಾಣಿಕೆ ಪುನರ್ ಆರಂಭಗೊಳ್ಳುವುದನ್ನು ಖಾತ್ರಿಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ' ಎಂದು ದೂರಿದೆ. ರಾಷ್ಟ್ರೀಯ ಹೆದ್ದಾರಿ-2 ಹಾಗೂ ರಾಷ್ಟ್ರೀಯ ಹೆದ್ದಾರಿ-37ರಲ್ಲಿ ವಾಹನಗಳ ಸಂಚಾರಕ್ಕೆ ಉಂಟಾಗಿರುವ ಅಡ್ಡಿಯಿಂದಾಗಿ, ಕುಕಿ-ಜೋ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅವುಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ದೂರಿದ್ದ ಸಿಒಟಿಯು, ಅಗತ್ಯ ವಸ್ತುಗಳ ಸಾಗಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜೂನ್ 27ರಂದು ಈ ಗಡುವು ನೀಡಿತ್ತು.
ಮೇ 13ರಂದು 6 ನಾಗಾ ಜನರನ್ನು ಅಪಹಹರಿಸಲಾಗಿತ್ತು. ಇದನ್ನು ಪ್ರತಿಭಟಿಸಿ, ನಾಗಾ ಸಂಘಟನೆಗಳು ಜಿಲ್ಲೆ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿದ್ದವು.

