ನವದೆಹಲಿ: ಭದ್ರತಾ ಕಾರಣಗಳಿಂದಾಗಿ ಇರಾನ್ ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ಅವರ ಪುತ್ರ ಮೊಜ್ತಬಾ ಖಾಮಿನೈ ಸಾರ್ವಜನಿಕವಾಗಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಭಾರತದಲ್ಲಿನ ಸರ್ವೋಚ್ಚ ನಾಯಕನ ಪ್ರತಿನಿಧಿ ಆಯತೊಲ್ಲಾ ಹಕೀಮ್ ಇಲಾಹಿ ತಿಳಿಸಿದ್ದಾರೆ ಎಂದು Indiatoday.in ವರದಿ ಮಾಡಿದೆ.
Indiatoday ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಇಲಾಹಿ, ಇಸ್ರೇಲ್ ನೊಂದಿಗೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಮೊಜ್ತಬಾ ಖಾಮಿನೈ ಅವರು ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು.
"ಕಳೆದ ವಾರ ನಾನು ಇರಾನ್ ನಲ್ಲಿದ್ದೆ. ಮೊಜ್ತಬಾ ಖಾಮಿನೈ ಅವರನ್ನು ಭೇಟಿಯಾದ ಕೆಲವು ಸ್ನೇಹಿತರೊಂದಿಗೆ ಮಾತನಾಡಿದ್ದೆ. ಅವರು ಸಾರ್ವಜನಿಕವಾಗಿ ಹೊರಬಂದು ಜನರನ್ನು ಭೇಟಿ ಮಾಡಲು ಬಯಸುತ್ತಿದ್ದಾರೆ. ಆದರೆ ಭದ್ರತಾ ಕಾರಣಗಳಿಂದ ಅವರಿಗೆ ಅನುಮತಿ ನೀಡಲಾಗುತ್ತಿಲ್ಲ" ಎಂದು ಇಲಾಹಿ ಹೇಳಿದರು.
"ಪರಿಸ್ಥಿತಿ ಅಪಾಯಕಾರಿಯಾಗಿದೆ. ಅವರಿಗೆ ಅಗತ್ಯ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ" ಎಂದು ಅವರು ಹೇಳಿದರು.
ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿರುವ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಗೆ ಇರಾನ್ ನಲ್ಲಿ ಬಹುದಿನಗಳ ಶೋಕಾಚರಣೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಯುತ್ತಿದೆ. ಖಾಮಿನೈ ಅವರ ನಿಧನದಿಂದ ದೇಶಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ ಎಂದು ಇಲಾಹಿ ಹೇಳಿದರು.
"ಜನರು ತಮ್ಮ ಆತ್ಮವನ್ನೇ ಕಳೆದುಕೊಂಡಂತಾಗಿದೆ ಎಂದು ಭಾವಿಸುತ್ತಿದ್ದಾರೆ. ಅವರನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಜನರಲ್ಲಿ ಇದೆ" ಎಂದು ಅವರು ಹೇಳಿದರು. ಇರಾನ್ ಮತ್ತು ವಿದೇಶಗಳಿಂದ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾರೆ ಎಂದೂ ಅವರು ತಿಳಿಸಿದರು.
ಇಸ್ರೇಲ್ನಿಂದ ಮತ್ತಷ್ಟು ಮಿಲಿಟರಿ ಕಾರ್ಯಾಚರಣೆಗಳ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಇಲಾಹಿ, "ಇರಾನ್ ಇನ್ನೂ ಪ್ರಬಲವಾಗಿದ್ದು, ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗಿದೆ" ಎಂದು ಹೇಳಿದರು.
ಇದೇ ವೇಳೆ, ಖಾಮಿನೈ ಅವರ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ಆಹ್ವಾನ ನೀಡಲಾಗಿದೆ. ಖುರ್ಷಿದ್ ಅವರು ಕಾಂಗ್ರೆಸ್ ಪರವಾಗಿ ಟೆಹ್ರಾನ್ಗೆ ತೆರಳಲಿದ್ದು, ಖರ್ಗೆ ಅವರ ಸಂತಾಪ ಪತ್ರವನ್ನು ಕೊಂಡೊಯ್ಯಲಿದ್ದಾರೆ.
ಟೆಹ್ರಾನ್ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಖುರ್ಷಿದ್, "ಸಂಕಷ್ಟದಲ್ಲಿರುವ ಸ್ನೇಹಿತ ರಾಷ್ಟ್ರದೊಂದಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ" ಎಂದು ಹೇಳಿದರು. ಹಿಂದಿನ ರಾಜತಾಂತ್ರಿಕ ಸಂದರ್ಭಗಳಲ್ಲಿ ಇರಾನ್ ಭಾರತವನ್ನು ಬೆಂಬಲಿಸಿತ್ತು ಎಂದೂ ಅವರು ಸ್ಮರಿಸಿದರು.

