ಕಾಸರಗೋಡು: ಹಿರಿಯ ಪ್ರಸಂಗಕರ್ತ ಯಕ್ಷಗಾನ ಅರ್ಥಧಾರಿ, ನಿವೃತ್ತ ಸೇಲ್ ಟೇಕ್ಸ್ ಅಧಿಕಾರಿ ಮಧೂರು ವೆಂಕಟಕೃಷ್ಣ (87) ವಯೋ ಸಹಜ ಅಸೌಖ್ಯದಿಂದ ಸೋಮವಾರ ಮಧೂರಿನ ಸ್ವಗೃಹದಲ್ಲಿ ನಿಧನರಾದರು.
ಕಾಸರಗೋಡಿನ ಮಾರಾಟ ತೆರಿಗೆ ಇಲಾಖೆ ಅಧಿಕಾರಿಯಾಗಿ ದೀರ್ಘ ಕಾಲ ಸಏವೆ ಸಲ್ಲಿಸಿ ನಿವೃತ್ತರಾದ ಇವರು, ಉಳಿಯ ಧನ್ವಂತರಿ ಯಕ್ಷಗಾನ ಸಂಘದ ಆಶ್ರಯದಲ್ಲಿ ಅರ್ಥಧಾರಿ, ವೇಷಧಾರಿ, ಕಲಾವಿದನಾಗಿ ಖ್ಯಾತನಾಮರಾಗಿದ್ದರು. ತೆಂಕುತಿಟ್ಟಿನ ಯಕ್ಷಗಾನದ ಹಿರಿಯ ಕಲಾವಿದ ಕೂಡ್ಲು ನಾರಾಯಣ ಬಲ್ಯಾಯ ಅವರ ಶಿಷ್ಯನಾಗಿ ಯಕ್ಷಗಾನ ಶಿಕ್ಷಣ ಪಡೆದ ಇವರು ಯಕ್ಷಗಾನ ಪ್ರಸಂಗಕರ್ತರಾಗಿಯೂ ಖ್ಯಾತಿ ಮೆರೆದಿದ್ದಾರೆ. ಇವರ ಸಾಧನೆ ಗೌರವಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರಿಗೆ ರಾಜ್ಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ.
ಜನಪ್ರಿಯವಿದ ಮಧೂರು ಕ್ಷೇತ್ರಮಹಾತ್ಮೆ ಸೇರಿದಂತೆ ಶಾಲಿನಿ ಪರಿಣಯ, ಧನ್ವಂತರಿ ಮಹಾತ್ಮೆ, ಹಲವಾರು ಕ್ಷೇತ್ರ ಮಹಾತ್ಮೆ, ಕುಂಟಾರು ಕ್ಷೇತ್ರ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ, ನಂದಗೋಕುಲದ ಪೊರ್ಲು ಸೇರಿದಂತೆ ಅನೇಕ ಪ್ರಸಂಗಗಳನ್ನು ರಚಿಸಿದ್ದು, ಇವರ ಬಹುತೇಕ ಪ್ರಸಂಗಗಳು ಮೇಳದ ಆಟ, ತಾಳಮದ್ದಳೆ ಕೂಟಗಳಲ್ಲಿ ಜನಪ್ರಿಯವಾಗಿವೆ.
ಇವರು ಬರೆದ" ಮಧೂರು ಕ್ಷೇತ್ರ ಮಹಾತ್ಮೆ" ಪ್ರಸಂಗ ಭಾರೀ ಜನಸ್ತೋಮದೊಂದಿಗೆ ಮಧೂರುಕ್ಷೇತ್ರ ಬ್ರಹ್ಮಕಲಶದ ವೇಳೆ ಪ್ರದರ್ಶನಗೊಂಡಿದ್ದು, ಇದೇ ವೇದಿಕೆಯಲ್ಲಿ ಇವರನ್ನು ಸನ್ಮಾನಿಸಲಿಗಿತ್ತು.
ಶಿವಳ್ಳಿ ಧ್ವನಿ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದರು. ಇವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.



