ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಗೆ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ಪಕ್ಷದ ಮೂವರು ಪ್ರಭಾವಿ ನಾಯಕರು ತಮ್ಮ ನೂರಾರು ಬೆಂಬಲಿಗರೊಂದಿಗೆ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಗುರುವಾರ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಮಾಜಿ ಸಚಿವರಾದ ಡಾ. ವಿಜಯಭಾಸ್ಕರ್, ಆನಂದನ್ ಮತ್ತು ವಿಜಯಭಾಸ್ಕರ್ ಟಿವಿಕೆ ಸೇರಿದ್ದಾರೆ.
ಮಾಮಲ್ಲಪುರಂನಲ್ಲಿ ಸಂಜೆ ನಡೆಯಲಿರುವ ಟಿವಿಕೆಯ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸಮ್ಮುಖದಲ್ಲಿ ಐಎಡಿಎಂಕೆ ಮುಖಂಡರು ಟಿವಿಕೆ ಧ್ವಜ ಹಿಡಿಯಲಿದ್ದಾರೆ.
ಟಿವಿಕೆ ಸೇರ್ಪಡೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಆರೋಗ್ಯ ಸಚಿವ ಡಾ. ಸಿ. ವಿಜಯಭಾಸ್ಕರ್, ಈ ತೀರ್ಮಾನವನ್ನು ನಾವು ತರಾತುರಿಯಲ್ಲಿ ಕೈಗೊಂಡಿಲ್ಲ. ನಮ್ಮ ಬೆಂಬಲಿಗರು, ಜಿಲ್ಲಾ ಪದಾಧಿಕಾರಿಗಳು ಮತ್ತು ನಮ್ಮ ವಿಧಾನಸಭಾ ಕ್ಷೇತ್ರದ ಮತದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಒಮ್ಮತದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಎಐಎಡಿಎಂಕೆ ನಾಯಕತ್ವದ ತಪ್ಪು ನಿರ್ಧಾರಗಳೇ ತಾವು ಪಕ್ಷ ತೊರೆಯಲು ಕಾರಣ ಎಂದು ವಿಜಯಭಾಸ್ಕರ್ ದೂರಿದರು.
ಮಾಜಿ ಸಾರಿಗೆ ಸಚಿವ ಎಂ.ಆರ್. ವಿಜಯಭಾಸ್ಕರ್ ಅವರು ಕರೂರ್ನಿಂದ ತಮ್ಮ ನೂರಾರು ಬೆಂಬಲಿಗರೊಂದಿಗೆ ಈಗಾಗಲೇ ಮಾಮಲ್ಲಪುರಂ ತಲುಪಿದ್ದು, ಟಿವಿಕೆ ಸೇರಲು ಸಜ್ಜಾಗಿದ್ದಾರೆ. ಇವರ ಬೆಂಬಲಿಗರು ನೂರಾರು ಬಸ್ಗಳು ಮತ್ತು ಖಾಸಗಿ ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
45 ವರ್ಷಗಳ ಕಾಲ ಎಐಎಡಿಎಂಕೆಗೆ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದ ಮಾಜಿ ಸಚಿವ ಎಂ.ಎಸ್.ಎಂ. ಆನಂದನ್ ಅವರು ಎಐಎಡಿಎಂಕೆ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಪಿಎಸ್ ನೇತೃತ್ವದಲ್ಲಿ ಎಐಎಡಿಎಂಕೆಯ ಸ್ವಾರ್ಥ ಸಂಘಟನೆಯಾಗಿ ಬದಲಾಗಿದೆ. ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ ಮಾಡಲಾಗುತ್ತಿದೆ ಎಂದು ದೂರಿದರು.
ಮಾಜಿ ಸಚಿವರ ಜೊತೆಗೆ ತಿರುಚಿರಾಪಳ್ಳಿಯ ವಲರ್ಮತಿ, ಜಿಲ್ಲಾ ಕಾರ್ಯದರ್ಶಿಗಳಾದ ಪಿ.ಕೆ. ವೈರಮುತ್ತು, ತಮಿಳ್ ಸೆಲ್ವನ್, ಒರತ್ತನಾಡು ಶೇಖರ್ ಮತ್ತು ತಿರುಚಿ ಶ್ರೀನಿವಾಸನ್ ಸೇರಿದಂತೆ ಪ್ರಮುಖ ನಾಯಕರು ಟಿವಿಕೆ ಸೇರ್ಪಡೆಯಾಗಲಿದ್ದಾರೆ.

