ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶದ ವಿವಿಧೆಡೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ಬಗ್ಗೆ 'ಡಬಲ್' ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕಳವಳ ವ್ಯಕ್ತಪಡಿಸಿದ್ದು, ಈ ವಿಷಯವು ರಾಜಕೀಯವನ್ನು ಮೀರಿದ, ದೇಶದ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಜೀವನದಲ್ಲಿ ನ್ಯಾಯಯುತ ಅವಕಾಶ ದೊರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಮನು ಭಾಕರ್, ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
"ಈ ಹಂತದಲ್ಲಿ ಇದು ನಮ್ಮ ದೇಶದ ಭವಿಷ್ಯದ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇದು ನಮ್ಮೆಲ್ಲರ ವಿಚಾರ" ಎಂದು ಅವರು ಹೇಳಿದ್ದಾರೆ.
"ನಾನು ವಿದ್ಯಾರ್ಥಿಯಾಗಿದ್ದೆ. ಒಂದು ಹಂತದಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳಾಗಿದ್ದೇವೆ. ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಜೀವನದಲ್ಲಿ ನ್ಯಾಯಯುತ ಅವಕಾಶ ದೊರೆಯಬೇಕು. ಇವು ಸವಲತ್ತುಗಳಲ್ಲ, ಮೂಲಭೂತ ಹಕ್ಕುಗಳು" ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಜೀವ ಕಳೆದುಕೊಂಡ ಮಕ್ಕಳನ್ನು ಉಲ್ಲೇಖಿಸಿದ ಅವರು, "ಅವರು ನಮ್ಮ ದೇಶದ ಭವಿಷ್ಯವಾಗಬೇಕಿತ್ತು. ಅವರ ಕನಸುಗಳು, ಸಾಮರ್ಥ್ಯ ಮತ್ತು ಭವಿಷ್ಯವನ್ನು ನಾವು ರಕ್ಷಿಸಬೇಕಾಗಿತ್ತು" ಎಂದು ಹೇಳಿದ್ದಾರೆ.
ಈ ವಿಷಯವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿರುವ ಮನು ಭಾಕರ್, "ಇದು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಅಥವಾ ವಿರೋಧಿಸುವ ವಿಷಯವಲ್ಲ. ಶಿಕ್ಷಣ, ಪರಿಸರ, ಸುರಕ್ಷತೆ ಮತ್ತು ಹೊಣೆಗಾರಿಕೆಯಂತಹ ನಿಜವಾಗಿಯೂ ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡುವ ವಿಚಾರ ಇದು. ನಮ್ಮ ರಾಜಕೀಯ ನಿಲುವುಗಳು ಏನೇ ಇರಲಿ, ಈ ಸಮಸ್ಯೆಗಳು ನಮ್ಮೆಲ್ಲರ ಮೇಲೂ ಪರಿಣಾಮ ಬೀರುತ್ತವೆ" ಎಂದು ಹೇಳಿದ್ದಾರೆ.
ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದಿರುವ ಅವರು, "ವಿದ್ಯಾರ್ಥಿಗಳು ಈ ರೀತಿಯಾಗಿ ಸಂತ್ರಸ್ತರಾಗುವುದನ್ನು ನೋಡುವುದು ಅತ್ಯಂತ ಹೃದಯ ವಿದ್ರಾವಕವಾಗಿದೆ. ನಾವು ಅವರಿಗೆ ಇನ್ನಷ್ಟು ಉತ್ತಮ ಭವಿಷ್ಯವನ್ನು ನೀಡಬೇಕಾಗಿದೆ. ಪ್ರತಿಯೊಬ್ಬ ಮಗುವೂ ಭಯವಿಲ್ಲದೆ ಕಲಿಯುವ, ಬೆಳೆಯುವ ಮತ್ತು ಕನಸು ಕಾಣುವ ಭವಿಷ್ಯವನ್ನು ನಿರ್ಮಿಸುವ ಹೊಣೆ ನಮ್ಮ ಮೇಲಿದೆ" ಎಂದು ಹೇಳಿದ್ದಾರೆ.

