ಕಾಸರಗೋಡು: ಬಡ ರೋಗಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾಸರಗೋಡು ತೆರುವತ್ನಲ್ಲಿ ಆರಂಭಿಸಲಾದ ತೆರುವತ್ ಸಮುದಾಯ ಪ್ರತಿಷ್ಠಾನವನ್ನು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮೂಲಭೂತ ಔಷಧ ಪಡೆಯಲೂ ಸಾಧ್ಯವಾಗದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರತಿಷ್ಠಾನವು ಸಮಾಜಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ತಿಳಿಸಿದರು.
ಮಾಜಿ ಶಾಸಕ ಎನ್.ಎ. ನೆಲ್ಲಿಕ್ಕುನ್ನು ಅವರು ಕಾಸರಗೋಡು ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ್ ಅವರಿಗೆ ಔಷಧ ಹಸ್ತಾಂತರಿಸುವ ಮೂಲಕ ಉಚಿತ ಔಷಧ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತೆರುವತ್ ಜುಮಾ ಮಸೀದಿಯ ಖತೀಬ್ ಪ್ರಾರ್ಥನೆ ನೆರವೇರಿಸಿದರು. ಫೌಂಡೇಶನ್ ಅಧ್ಯಕ್ಷ ಕೆ.ಎಂ. ಬಶೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಎಂ. ನೈಮುನ್ನೀಸಾ, ಮಫಿನಾ ಹನೀಫಾ, ಮಾಜಿ ಸದಸ್ಯರಾದ ಕೆ.ಎಂ. ಅಬ್ದುಲ್ ರಹಮಾನ್ ಮತ್ತು ಹಫೀಲಾ, ಕೆ.ಎಚ್. ಅಶ್ರಫ್ ಮತ್ತು ಶಫಿ ತೆರುವತ್ ಉಪಸ್ಥಿತರಿದ್ದರು. ಮೊಹಮ್ಮದ್ ಹಾಜಿ ಸ್ವಾಗತಿಸಿದರು. ನಗರಸಭಾ ಸದಸ್ಯ ರೆಹಮಾನ್ ತೊಟ್ಟನ್ ವಂದಿಸಿದರು.



