ನವದೆಹಲಿ: 'ಡಬಲ್ ಎಂಜಿನ್' ಎನ್ಡಿಎ ಸರ್ಕಾರಗಳ ಭಾರಿ ಭರವಸೆಗಳು ಮಾಯವಾಗಿದ್ದು, ಈಶಾನ್ಯ ಭಾರತದಲ್ಲಿ ಪ್ರವಾಹ ಎಂಬುದು ವಾರ್ಷಿಕ ವಿದ್ಯಮಾನದಂತೆ ಭಾಸವಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ.
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತವನ್ನು ಉಲ್ಲೇಖಿಸಿ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರ ಈ ಘಟನೆಯನ್ನು ಮತ್ತೊಂದು ವಾಡಿಕೆಯ ವಿಪತ್ತು ಎಂದು ಪರಿಗಣಿಸಬಾರದು ಎಂದು ಹೇಳಿರುವ ಅವರು, 'ಪಿಎಂ ಕೇರ್ಸ್ ನಿಧಿಯನ್ನು ಬಳಸಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ, ಸಮಗ್ರ ಪುನರ್ವಸತಿ ಮತ್ತು ಸುಸ್ಥಿರ ಬದುಕು ಕಟ್ಟಿಕೊಡಬೇಕು' ಎಂದು ಆಗ್ರಹಿಸಿದ್ದಾರೆ.
ಪ್ರವಾಹ ಮತ್ತು ಭೂಕುಸಿತದಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ತಿಳಿಸಿರುವ ಖರ್ಗೆ ಅವರು, ಸಂತ್ರಸ್ತರಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ತಿಳಿಸಿದ್ದಾರೆ.

