ನವದೆಹಲಿ: ಇಲ್ಲಿನ ಅಗ್ನಿಶಾಮಕ ಸೇವೆಗಳ ಪ್ರಧಾನ ಕಚೇರಿಯಲ್ಲಿ (ಡಿಎಫ್ಎಸ್) ದೆಹಲಿಯ ಮೊದಲ ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಪರಮಾಣು ರಕ್ಷಿತ ಭೂಗತ ಕೇಂದ್ರವು (ಸಿಬಿಆರ್ಎನ್) ಸ್ಥಾಪನೆಯಾಗಲಿದೆ. ರಾಸಾಯನಿಕ, ಅನಿಲ, ವಿಕಿರಣ ಸೋರಿಕೆಯಂತಹ ವಿಪತ್ತುಗಳು ಸಂಭವಿಸಿದಾಗ ಕ್ಷಿಪ್ರ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೊಡ್ಡ ಪ್ರಮಾಣದ ಬಿಕ್ಕಟ್ಟು ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಈ ಕೇಂದ್ರ ಸ್ಥಾಪನೆಯಾಗಲಿದೆ. ಡಿಎಫ್ಎಸ್ನ ಪ್ರಧಾನ ಕಚೇರಿಯಲ್ಲಿ ಸಿಬಿಆರ್ಎನ್ ಕೇಂದ್ರಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಕೇಂದ್ರವು 'ಪ್ಲಗ್ ಆಯಂಡ್ ಪ್ಲೇ' ಮಾದರಿಯಲ್ಲಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ತುರ್ತು ಕಾರ್ಯಾಚರಣೆ ಸಂದರ್ಭದಲ್ಲಿ ಇತರೆ ಇಲಾಖೆಗಳೊಂದಿಗೂ ಸಮನ್ವಯ ಸಾಧಿಸುತ್ತದೆ.
'ಈ ಭೂಗತ ಕೇಂದ್ರದೊಳಗಿನ ಸಿಬ್ಬಂದಿ ಮೇಲೆ ವಿಕಿರಣವು ಯಾವುದೇ ರೀತಿಯಲ್ಲಿ ಪರಿಣಾಮ ಬೀರದಂತೆ ಕೇಂದ್ರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಸಿಬಿಆರ್ಎನ್ ಕಾರ್ಯಾಚರಣೆಗೆ ಸಿದ್ಧಗೊಳ್ಳಲಿದೆ' ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಪ್ರಧಾನ ಅಧಿಕಾರಿ ಅಭಿಲಾಷ್ ಮಲಿಕ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸದ್ಯ ದೆಹಲಿ ಅಗ್ನಿಶಾಮ ಸೇವೆಗಳ ಪ್ರಧಾನ ಕಚೇರಿ ವ್ಯಾಪ್ತಿಯಲ್ಲಿ 71 ಅಗ್ನಿಶಾಮಕ ಠಾಣೆಗಳು, 2,459 ಸಿಬ್ಬಂದಿ ಇದ್ದಾರೆ.

